ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗುವಲ್ಲಿ ವಿಳಂಬವಾಗಿರುವುದು, ಇದು ನಮ್ಮ ವಿರುದ್ಧ ನೀಡಲಾದ ಸುಳ್ಳು ಆರೋಪ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಗಳಿಬ್ಬರು ಮಾಡಿರುವ ವಾದವನ್ನು ತಿರಸ್ಕರಿಸಿರುವ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಎಂಸಿ ಗುಪ್ತಾ, " ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ ದೂರು ದಾಖಲಾಗುವಲ್ಲಿ ವಿಳಂಬ ಸಾಮಾನ್ಯ ವಿದ್ಯಮಾನವಾಗಿದೆ. ಅನ್ಯಾಯಕ್ಕೊಳಗಾದ / ಪೀಡಿತ ವ್ಯಕ್ತಿ ಅಥವಾ ಅವರ ಸಂಬಂಧಿಗಳು ಸ್ವಾಭಾವಿಕವಾಗಿ ಪೊಲೀಸರಿಗೆ ದೂರು ನೀಡುವ ಮುನ್ನ ಎರಡು ಬಾರಿ ಚಿಂತಿಸುತ್ತಾರೆ" ಎಂದಿದ್ದಾರೆ.
ದೂರು ನೀಡುವುದರ ಕುರಿತಂತೆ ಬಲಿಪಶು ಮತ್ತು ಅವರ ಕುಟುಂಬದ ಸದಸ್ಯರ ಮನಸ್ಸಿನಲ್ಲಿ ಹಲವಾರು ಅಂಶಗಳು ತೂಗುತ್ತಿರುತ್ತವೆ. ಮುಖ್ಯವಾಗಿ "ಸಂಪ್ರದಾಯಬದ್ಧ" ಭಾರತೀಯ ಸಮಾಜದಲ್ಲಿ, ರೇಪ್ನಂತಹ ಪ್ರಕರಣಗಳಲ್ಲಿ ಕಾನೂನು ಮೊರೆ ಹೋಗಲು ಅನೇಕ ತೊಡಕುಗಳು ಅಡ್ಡ ಬರುತ್ತವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಎಪ್ರಿಲ್ 21, 2011 ರಂದು ತನ್ನ 16 ವರ್ಷದ ಮಗಳು ಕಳೆದ 5,6 ತಿಂಗಳಿಂದ ನಾಪತ್ತೆಯಾಗಿದ್ದಾಳೆ ಎಂದು ವ್ಯಕ್ತಿಯೊಬ್ಬರು ನರೇಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವಿಚಾರಣೆಯ ಸಮಯದಲ್ಲಿ, ಯುವಕ ಮತ್ತು ಅವನ ಸ್ನೇಹಿತ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ತಮ್ಮನ್ನು ತಪ್ಪಿತಸ್ಥರು ಎಂದು ಸಾಬೀತು ಪಡಿಸುವ ದುರುದ್ದೇಶ ಅವರದಾಗಿತ್ತು. ಅವರು ದೂರು ನೀಡುವುದರಲ್ಲಿ ಮಾಡಿರುವ ವಿಳಂಬ ಇದನ್ನು ಪುಷ್ಠೀಕರಿಸುತ್ತದೆ ಎಂಬ ವಾದವನ್ನವರು ಮುಂದಿಟ್ಟಿದ್ದರು. ಆದರೆ ಅವರ ಈ ವಾದವನ್ನು ನ್ಯಾಯಾಧೀಶರು ನಿರಾಕರಿಸಿದ್ದಾರೆ.