ಬೆಂಗಳೂರು: ನಗರದ ರಸ್ತೆ ಮೂಲಸೌಕರ್ಯಗಳ ಕುರಿತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಟೀಕೆಗೆ ಮತ್ತೇ ಪ್ರತಿಕ್ರಿಯಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದ್ಯದ ಪರಿಸ್ಥಿತಿಯಲ್ಲಿರುವ ರಸ್ತೆಯನ್ನು ಆಕೆ ಸರಿ ಪಡಿಸುವುದಾದರೆ ಮಾಡಲಿ. ಆಕೆ ಬಂದು ಕೇಳಲಿ, ನಾವು ಆಕೆಗೆ ರಸ್ತೆಯನ್ನು ನೀಡುತ್ತೇವೆ ಎಂದರು.
ಇಂದು ಕೆಆರ್ ಪುರಂನಲ್ಲಿ ಬೆಂಗಳೂರು ನಾಡಿಗೆ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು, ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟಿದ್ದು, ಇಲ್ಲಿನ ಪ್ರದೇಶದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಹೆಚ್ಚು ತೆರಿಗೆ ಪಾವತಿಸಿದೆ. ಬೆಂಗಳೂರು ನಗರದಿಂದ 6000 ಕೋಟಿ ತೆರಿಗೆ ಬರುತ್ತಿದ್ದು, ಈ ಪೈಕಿ ಪಾಲಿಕೆಗೆ 1600 ಕೋಟಿ ಬರುತ್ತಿದೆ, ಈ ಭಾಗದ ಜನರು ಹೆಚ್ಚು ತೆರಿಗೆ ಕಟ್ಟಿದ್ದಾರೆ, ಈ ಭಾಗದ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ್ದೇವೆ, ಬೆಂಗಳೂರಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ಅನುಮತಿ ನೀಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ನನ್ನನ್ನು ಭೇಟಿಯಾಗದೇ ಇರುವವರು 1533 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ತಿಳಿಸಿ, ಸಮಸ್ಯೆ ಹೇಳಿಕೊಂಡವರಿಗೆ ಕರೆ ಬರಲಿದ್ದು, ಪರಿಶೀಲನೆ ನಡೆಸುತ್ತೇವೆ, ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಇಂದು ಸಂಜೆಯೊಳಗೆ ಅಮಾನತು ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.