ಚೆನ್ನೈ: 70 ಲಕ್ಷ ಮೌಲ್ಯದ ಕಾರು, 800 ಗ್ರಾಂ ಚಿನ್ನಾಭರಣ ನೀಡಿದರೂ ಗಂಡನ ಮನೆಯವರ ವರದಕ್ಷಿಣೆ ದಾಹ ನೀಗಲಿಲ್ಲ. ಗಂಡನ ಮನೆಯವರ ಕಾಟ ತಡೆಯಲಾಗದೇ ಮದುವೆಯಾದ ಕೆಲವೇ ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ನಲ್ಲಿ ನಡೆದಿದೆ.
27 ವರ್ಷದ ರಿಧನ್ಯಾ ಎನ್ನುವ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುವುದಾಗಿ ಕಾರಿನಲ್ಲಿ ಹೊರಟಿದ್ದ ರಿಧನ್ಯಾ ದಾರಿ ಮಧ್ಯೆ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದಾಳೆ. ಸಾಯುವ ಮುನ್ನ ತನ್ನ ತಂದೆಗೆ 7 ಅಡಿಯೋ ಮೆಸೇಜ್ ಕಳುಹಿಸಿ ತನಗಾಗುತ್ತಿದ್ದ ಚಿತ್ರಹಿಂಸೆಯನ್ನು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ರಿಧನ್ಯಾ ಮೊನ್ನೆ ಏಪ್ರಿಲ್ 28 ಕ್ಕೆ ಕವಿನ್ ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಸಂದರ್ಭದಲ್ಲಿ ರಿಧನ್ಯಾ ತಂದೆ ಮನೆಯವರು 70 ಲಕ್ಷ ಮೌಲ್ಯದ ವೋಲ್ವೋ ಕಾರು, 800 ಗ್ರಾಂನಷ್ಟು ಚಿನ್ನಾಭರಣವನ್ನು ನೀಡಿದ್ದರು. ಇಷ್ಟೆಲ್ಲಾ ಮಾಡಿದ ಮೇಲೂ ಮತ್ತಷ್ಟು ಹಣಕ್ಕಾಗಿ ಗಂಡನ ಮನೆಯವರು ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ವರದಿಯಾಗಿದೆ.
ತಂದೆಗೆ ಕಳುಹಿಸಿದ ಅಡಿಯೋ ಸಂದೇಶದಲ್ಲಿ ರಿಧನ್ಯಾ ತನ್ನ ಗಂಡನ ಮನೆಯವರು ತನಗೆ ಇನ್ನೊಂದು ಮದುವೆ ಮಾಡಿಸಲೂ ಮುಂದಾಗಿದ್ದಾರೆ. ತನಗೆ ನಿತ್ಯವೂ ಆಗುತ್ತಿರುವ ಚಿತ್ರಹಿಂಸೆಯನ್ನು ಯಾರಲ್ಲೂ ಹೇಳಿಕೊಳ್ಳಲಾಗುತ್ತಿಲ್ಲ ಎಂದು ತಂದೆಗೆ ಕ್ಷಮೆಯನ್ನೂ ಕೇಳಿದ್ದಾಳೆ ಎನ್ನಲಾಗಿದೆ.
ಇದಕ್ಕೆ ಮೊದಲೇ ರಿಧನ್ಯಾ ತನ್ನ ಗಂಡನ ಮನೆಯಲ್ಲಾಗುತ್ತಿರುವ ಕಿರುಕುಳದ ಬಗ್ಗೆ ಪೋಷಕರಿಗೆ ಹೇಳಿದ್ದರು. ಆದರೆ ಆಗ ಕೊಂಚ ತಾಳ್ಮೆಯಿಂದಿರುವಂತೆ ರಿಧನ್ಯಾ ಪೋಷಕರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಇದು ಮುಂದುವರಿದೇ ಇತ್ತು. ಇದೀಗ ರಿಧನ್ಯಾ ಸಾವಿನ ಬಳಿಕ ಆಕ್ರೋಶಗೊಂಡಿರುವ ಆಕೆಯ ಪೋಷಕರು ಮತ್ತು ಕುಟುಂಬದವರು ಆಸ್ಪತ್ರೆಯ ಬಳಿಯೇ ಪ್ರತಿಭಟನೆ ನಡೆಸಿದ್ದಾರೆ. ಇನ್ನು, ರಿಧನ್ಯಾಳನ್ನು ನೋಡಲು ಆಕೆಯ ಅತ್ತೆ ಮನೆಯವರು ಆಸ್ಪತ್ರೆಗೆ ಬಂದಾಗ ಜನ ರೊಚ್ಚಿಗೆದ್ದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಇದೀಗ ಪತಿ ಕವಿನ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.