ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ ವೇಳೆ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಸಂಸದರಿಗೆ ಹಾಜರಾತಿ ಇರಬೇಕೆಂದು ಸೂಚನೆ ಕೊಟ್ಟಿದ್ದರೂ ಗಾಂಧಿ ಕುಟುಂಬದ ಕುಡಿ ಪ್ರಿಯಾಂಕ ವಾದ್ರಾ ಗೈರಾಗಿದ್ದರು. ಅವರು ಎಲ್ಲಿ ಹೋಗಿದ್ದರು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಮೊನ್ನೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ನಿನ್ನೆ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಎರಡೂ ಸಭೆಯಲ್ಲಿ ಈಗ ಮಸೂದೆಗೆ ಅಂಗೀಕಾರ ಸಿಕ್ಕಿದ್ದು ರಾಷ್ಟ್ರಪತಿಗಳ ಒಪ್ಪಿಗೆ ಮುದ್ರೆಯೊಂದಷ್ಟೇ ಬಾಕಿ.
ಇದರ ನಡುವೆ ವಕ್ಫ್ ಮಸೂದೆ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಮಸೂದೆ ವಿರುದ್ಧ ಮತ ಹಾಕಲು ತನ್ನ ಎಲ್ಲಾ ಸಂಸದರೂ ಕಡ್ಡಾಯವಾಗಿ ಸಂಸತ್ ಗೆ ಹಾಜರಾಗಲೇಬೇಕು ಎಂದು ವಿಪ್ ಜಾರಿ ಮಾಡಿತ್ತು. ಹಾಗಿದ್ದರೂ ಪ್ರಿಯಾಂಕ ವಾದ್ರಾ ಗೈರಾಗಿದ್ದರು.
ಅಷ್ಟಕ್ಕೂ ಪ್ರಿಯಾಂಕ ಯಾಕೆ ಗೈರಾಗಿದ್ದರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಪ್ರಿಯಾಂಕ ವಿದೇಶದಲ್ಲಿದ್ದಾರೆ. ಈ ಬಗ್ಗೆ ಅವರು ಮುಂಚಿತವಾಗಿಯೇ ಸ್ಪೀಕರ್ ಮತ್ತು ಕಾಂಗ್ರೆಸ್ ಸಂಸದೀಯ ಸಮಿತಿಗೆ ಪತ್ರ ಬರೆದು ವಿನಾಯ್ತಿ ಕೋರಿದ್ದರು. ಹೀಗಾಗಿ ಅವರು ಗೈರಾಗಿದ್ದರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.