ಹಾಲು ತರಲು ಹಣ ಕೇಳಿದ ಪತ್ನಿಯನ್ನು ಸಜೀವವಾಗಿ ದಹಿಸಿದ ಪತಿ ಮಹಾಶಯ

ಶನಿವಾರ, 3 ಡಿಸೆಂಬರ್ 2016 (15:12 IST)
ಹಾಲು ಖರೀದಿಸಲು ಪತ್ನಿ ಹಣ ಕೇಳಿದ್ದರಿಂದ ಆಕ್ರೋಶಗೊಂಡ ಪತಿ ಮಹಾಶಯ ಅಕೆಯನ್ನು ಸಜೀವವಾಗಿ ದಹಿಸಲು ಯತ್ನಿಸಿದ ಹೇಯ ಘಟನೆ ವರದಿಯಾಗಿದೆ. ಮಹಿಳೆಗೆ ಶೇ.80 ರಷ್ಟು ಸುಟ್ಟಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
 
ಬೋಸರಿ ಪ್ರದೇಶದ ಬಾಲಾಜಿ ನಗರ ನಿವಾಸಿಯಾದ 21 ವರ್ಷ ವಯಸ್ಸಿನ ಮಹಿಳೆ ರೇಖಾ ಜಾಧವ್, ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪತಿ ಶಹಾಜಿ ಜಾಧವ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
 
ಪತಿ ಮತ್ತು ಪತ್ನಿಯ ಮಧ್ಯೆ ಪ್ರತಿನಿತ್ಯ ಕಲಹವಾಗುತ್ತಿದ್ದು, ರೇಖಾಳ ತಂದೆ ಆಕೆಯ ಮನೆಗೆ ತೆರಳಿ ಪತಿ ಪತ್ನಿಯ ಮಧ್ಯದ ವಿರಸವನ್ನು ಬಗೆಹರಿಸಲು ಪ್ರಯತ್ನಿಸಿದ್ದರು ಎಂದು ಭೋಸರಿ ಪೊಲೀಸ್ ಠಾಣೆಯ ಅಧಿಕಾರಿ ಭೀಮರಾವ್ ಶಿಂಗಾಡೆ ತಿಳಿಸಿದ್ದಾರೆ.
 
ಜೀವನ್ಮರಣದ ಸ್ಥಿತಿಯಲ್ಲಿರು ರೇಖಾ ಪೊಲೀಸರಿಗೆ ಹೇಳಿಕೆ ನೀಡಿ, ಬೆಳಿಗ್ಗೆ ಟೀ ತಯಾರಿಸುವಂತೆ ಪತಿ ನನಗೆ ಹೇಳಿದ.ಆದರೆ, ಮನೆಯಲ್ಲಿ ಹಾಲು ಇರಲಿಲ್ಲ. ಹಾಲು ತರಲು ಹಣ ನೀಡುವಂತೆ ಪತಿಯನ್ನು ಕೋರಿದಾಗ, ಕೋಪಗೊಂಡ ಆತ ನನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ತಿಳಿಸಿದ್ದಾಳೆ.
 
ಪೊಲೀಸರು ಆರೋಪಿ ಶಹಾಜಿ ಜಾಧವ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ನಡೆದಾಗ ತಾನು ಮನೆಯಲ್ಲಿಯೇ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಆತನ ಪತ್ನಿಯ ಹೇಳಿಕೆಯ ಮೇರೆಗೆ ಜಾಧವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ