ಕೇಂದ್ರ ಗೃಹಸಚಿವಾಲಯ ಬಿಹಾರ್ ಮಾಜಿ ಸಿಎಂ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಝಡ್ ಶ್ರೇಣಿ ಭದ್ರತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಲಾಲು ಪುತ್ರ ತೇಜ್ ಪ್ರತಾಪ್, ತಂದೆಗೇನಾದ್ರೂ ಅನಾಹುತವಾದಲ್ಲಿ ಪ್ರಧಾನಿ ಮೋದಿಯ ಚರ್ಮ ಸುಲಿಯುತ್ತೇವೆ ಎಂದು ಗುಡುಗಿದ್ದಾರೆ.
ಎನ್ಎಸ್ಜಿ ಭದ್ರತೆಯನ್ನು ಹಿಂಪಡೆದಿರುವ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ತೇಜ್ ಪ್ರತಾಪ್, ತಂದೆಗೆ ಅನಾಹುತವಾದಲ್ಲಿ ಪ್ರಧಾನಿ ಮೋದಿಯವರ ಚರ್ಮ ಸುಲಿಯುತ್ತೇವೆ. ನಮ್ಮ ತಂದೆಯನ್ನು ಹತ್ಯೆ ಮಾಡಲು ಇದೊಂದು ಕೇಂದ್ರ ಸರಕಾರದ ಸಂಚು ಎಂದು ಕಿಡಿಕಾರಿದ್ದಾರೆ.
ತೇಜ್ ಪ್ರತಾಪ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ಮುಖಂಡ ಸುಶೀಲ್ ಮೋದಿ, ಲಾಲು ಯಾದವ್ಗೆ ತೊಂದರೆಯಾದಲ್ಲಿ ಕೇಂದ್ರ ಮತ್ತಪ ರಾಜ್ಯ ಸರಕಾರ ಹೊಣೆ ಎನ್ನುವುದು ತಪ್ಪು. ಘಟನೆಗಳು ನಡೆಯುತ್ತಿರುತ್ತವೆ. ಮಾಜಿ ಪ್ರದಾನಿ ಇಂದಿರಾಗಾಂಧಿಗೆ ಭಾರಿ ಭದ್ರತೆಯಿದ್ದರೂ ಹತ್ಯೆಯಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಭಧ್ರತೆಯನ್ನು ಹಿಂಪಡೆಯುವ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿರುವ ಮಾಂಜಿ, ನಾನು ನಕ್ಸಲ್ ಪೀಡಿತ ಪ್ರದೇಶದವನಾಗಿದ್ದರಿಂದ ನನ್ನ ಜೀವಕ್ಕೆ ಬೆದರಿಕೆಯಿದೆ. ಒಂದು ವೇಳೆ ನನ್ನ ಜೀವಕ್ಕೆ ಅಪಾಯವಾದಲ್ಲಿ ಕೇಂದ್ರ ಮತ್ತು ನಿತೀಶ್ ಕುಮಾರ್ ಸರಕಾರವೇ ನೇರ ಹೊಣೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.