ಪ್ರಿಯತಮೆಯನ್ನು 22 ಬಾರಿ ಇರಿದು ಕೊಂದ; ಆರೋಪಿ ಬಂಧನ (ವಿಡಿಯೋ)

ಬುಧವಾರ, 21 ಸೆಪ್ಟಂಬರ್ 2016 (11:03 IST)
ರಾಷ್ಟ್ರ ರಾಜಧಾನಿ ದಿನೇ ದಿನೇ ಅಪರಾಧಗಳ ತವರಾಗಿ ಬದಲಾಗುತ್ತಿದೆ. ಮಂಗಳವಾರ ಬೆಳಿಗ್ಗೆ ಯುವತಿಯೋರ್ವಳನ್ನು ಸಾರ್ವಜನಿಕರೆದುರೇ 22 ಬಾರಿ ಇರಿದು ಕೊಲೆ ಮಾಡಲಾಗಿದೆ. ನಡುರಸ್ತೆಯಲ್ಲೇ ಈ ಘಟನೆ ನಡೆದರೂ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಮೃತಳನ್ನು 21 ವರ್ಷದ ಕರುಣಾ ಎಂದು ಗುರುತಿಸಲಾಗಿದ್ದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಆಕೆ ಉತ್ತರ ದೆಹಲಿಯ ನಿವಾಸಿಯಾಗಿದ್ದಳು.
 
ಬುರಾರಿ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಕೆಯನ್ನು ಹಿಂಬಾಲಿಸಿದ ಆರೋಪಿ ಸುರೇಂದ್ರಸಿಂಗ್ ಆಕೆಯನ್ನು ಅಮಾನುಷವಾಗಿ ಕೊಚ್ಚಿ ಹಾಕಿದ್ದಾನೆ. ಆ ಸಮಯದಲ್ಲಿ ಅಲ್ಲಿದ್ದ ಸಾರ್ವಜನಿಕರ್ಯಾರೂ ಆಕೆಯ ಸಹಾಯಕ್ಕೆ ಬಂದಿಲ್ಲ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದಿದ್ದಳು. 
 
ವಿಚ್ಛೇದಿತನಾಗಿರುವ ಆರೋಪಿ ಕಳೆದ ಒಂದು ವರ್ಷದಿಂದ ಕರುಣಾಳನ್ನು ಪ್ರೀತಿಸುತ್ತಿದ್ದ ಮತ್ತು ಮದುವೆಯಾಗುವಂತೆ ಕಾಡುತ್ತಿದ್ದ. ಈ ಕುರಿತು ಆಕೆಯ ಪೋಷಕರು ಪೊಲೀಸರಲ್ಲಿ ದೂರು ಕೂಡ ನೀಡಿದ್ದರು. ಆದರೆ ಎರಡು ಕುಟುಂಬ ರಾಜಿಯಾಗಿದ್ದರಿಂದ ಪ್ರಕರಣ ಇತ್ಯರ್ಥವಾಗಿತ್ತು. ಆದರೆ ಸುರೇಂದ್ರ ಸಿಂಗ್ ಆಕೆಯನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ. 

 ಪ್ರಿಯತಮೆಯನ್ನು 22 ಬಾರಿ ಇರಿದು ಕೊಂದ; ಆರೋಪಿ ಬಂಧನ

ವೆಬ್ದುನಿಯಾವನ್ನು ಓದಿ