Sanju Samson: ವಿಪರೀತ ಕೋಪ, ವಿವಾದಗಳ ರಾಜನಾಗಿದ್ದ ಸಂಜು ಸ್ಯಾಮ್ಸನ್

Krishnaveni K

ಶನಿವಾರ, 4 ಮೇ 2024 (10:51 IST)
Photo Courtesy: Twitter
ತಿರುವನಂತರಪುರಂ: ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇಂದು ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಮಿಂಚುವುದರ ಜೊತೆಗೆ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಸಂಜು ಸ್ಯಾಮ್ಸನ್ ಗೆ ಪ್ರತಿಭೆಯಿದ್ದರೂ ಅದಕ್ಕೆ ತಕ್ಕಷ್ಟು ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ ಎಂಬ ಆಕ್ಷೇಪ ಅವರ ಅಭಿಮಾನಿಗಳಲ್ಲಿದೆ. ಇದಕ್ಕೆ ವಿಕೆಟ್ ಕೀಪರ್ ‍ಬ್ಯಾಟಿಗ ಸ್ಥಾನಕ್ಕೆ ಭಾರತ ತಂಡದಲ್ಲಿದ್ದ ಪೈಪೋಟಿ ಪ್ರಮುಖ ಕಾರಣ. ಆದರೆ ಎಷ್ಟೇ ಬಾರಿ ಆಯ್ಕೆಗಾರರ ಅವಕೃಪೆಗೊಳಗಾಗಿದ್ದರೂ ಸಂಜು ತಾಳ್ಮೆಯಿಂದಲೇ ತಮ್ಮ ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಆದರೆ ಸಂಜು ಮೊದಲು ಹೀಗಿರಲಿಲ್ಲ.

ಕೇರಳ ತಂಡದ ಪರ ಆಡುವಾಗ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂಜು ವಿಪರೀತ ಕೋಪಿಷ್ಠ, ವಿವಾದಗಳ ರಾಜನಂತಿದ್ದರು. ಕೇರಳ ತಂಡದಲ್ಲಿ ರಣಜಿ ಆಡುವಾಗ ಅವರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿಂದ ಶಿಸ್ತು ಕ್ರಮವನ್ನೂ ಎದರುಸಿದ್ದರು. 2016 ರಲ್ಲಿ ರಣಜಿ ಆಡುವಾಗ ಹೇಳದೇ ಕೇಳದೇ ತಂಡವನ್ನು ಬಿಟ್ಟು ಹೊರಗೆ ಸುತ್ತಾಡಲು ಹೋಗಿದ್ದಕ್ಕೆ ಸಂಜು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.

ಇದೇ ರೀತಿ ಕೇರಳ ಪರ ಆಡುವಾಗ ಸಂಜು ಔಟಾಗಿದ್ದಕ್ಕೆ ಸಿಟ್ಟಿನಲ್ಲಿ ಬ್ಯಾಟ್ ಕುಕ್ಕಿ ಪೆವಿಲಿಯನ್ ನಲ್ಲಿ ಹಾನಿ ಮಾಡಿದ್ದಕ್ಕೆ ದಂಡನೆಗೊಳಗಾಗಿದ್ದರು. ಕೇರಳ ನಾಯಕ ಸಚಿನ್ ಬೇಬಿ ಜೊತೆ ಅಶಿಸ್ತಿನ ವರ್ತನೆ ತೋರಿದ್ದಕ್ಕೆ 3 ಪಂದ್ಯಗಳ ನಿಷೇಧಕ್ಕೂ ಒಳಗಾಗಿದ್ದರು.

ಇಂತಹ ದುರ್ವರ್ವತನೆಗಳಿಂದಲೇ ಸುದ್ದಿಯಾಗಿದ್ದ ಸಂಜು ಸ್ಯಾಮ್ಸನ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಎ ತಂಡದ ಪರ ಆಡಲು ಆರಂಭಿಸಿದ ಮೇಲೆ ಕ್ರಿಕೆಟಿಗನಾಗಿ ಕೊಂಚ ಪ್ರಬುದ್ಧತೆ ಬೆಳೆಸಿಕೊಂಡರು. 2018 ರಲ್ಲಿ ಚಾರುಲತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಂಜು ಸಂಪೂರ್ಣವಾಗಿ ಬದಲಾದರು. ಜೀವನದಲ್ಲಿ ಪತ್ನಿಯಿಂದಲೂ ತಾನು ಸಾಕಷ್ಟು ಕಲಿತಿರುವುದಾಗಿ ಸಂಜು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಂದಿನ ಸಂಜುಗೂ ಇಂದಿನ ಸಂಜುಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದಕ್ಕೆ ಅವರ ಇತ್ತೀಚೆಗಿನ ವರ್ತನೆಗಳೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ