ಮಮತಾ ಪೂಜಾರಿಗೆ ರೂ 1 ಕೋಟಿ ಪ್ರೋತ್ಸಾಹ ಧನ ನೀಡಲು ಆಗ್ರಹ

ಸೋಮವಾರ, 12 ಮಾರ್ಚ್ 2012 (17:00 IST)
PTI
ಇತ್ತೀಚೆಗೆ ವಿಶ್ವಕಪ್ ಕಬಡ್ಡಿ ಗೆದ್ದ ಭಾರತ ತಂಡದ ನಾಯಕಿ ಉಡುಪಿಯ ಮಮತಾ ಪೂಜಾರಿಯವರಿಗೆ ಸರ್ಕಾರ ರೂ. 1 ಕೋಟಿ ಬಹುಮಾನ ಘೋಷಣೆ ಮಾಡಬೇಕು ಎಂದು ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಎಂ. ಹನುಮಂತೇಗೌಡ ಒತ್ತಾಯಿಸಿದರು.

ಅವರು ಜಿಲ್ಲೆಯ ಹಿರಿಯೂರು ನಗರದ ನೆಹರು ಮೈದಾನದಲ್ಲಿ ಭಾನುವಾರ ನ್ಯೂಡೈಮಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವಕಪ್ ಕಬಡ್ಡಿ ತಂಡದಲ್ಲಿದ್ದ ನೆರೆಯ ರಾಜ್ಯದ ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ರೂ. 1 ಕೋಟಿ ಬಹುಮಾನ ನೀಡಿವೆ. ಆದರೆ ಭಾರತೀಯ ಕಬ್ಬಡಿ ತಂಡದ ನಾಯಕಿಯಾಗಿರುವ ನಮ್ಮ ಮಮತಾ ಪೂಜಾರಿಗೆ ಸರಕಾರ ಕೇವಲ ರೂ. 5 ಲಕ್ಷ ನೀಡಿದ್ದು, ನಮ್ಮ ರಾಜ್ಯದ ಕ್ರೀಡಾಪಟುವಿಗೆ ಅನ್ಯಾಯ ಮಾಡಿದಂತೆ ಆಗಿದೆ.

ನಮ್ಮ ಸರಕಾರವೂ ರೂ. 1 ಕೋಟಿ ಪ್ರೋತ್ಸಾಹ ಧನ ನೀಡುವ ಮೂಲಕ ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಮಮತಾ ಪೂಜಾರಿ ಅವರಿಗೆ ರಾಜ್ಯ ಕಬಡ್ಡಿ ಸಂಸ್ಥೆ ವತಿಯಿಂದ ರೂ. 50 ಸಾವಿರ ಬಹುಮಾನ ನೀಡಲಾಗುವುದು ಎಂದು ಅವರು ಘೋಷಿಸಿದರು.

ವೆಬ್ದುನಿಯಾವನ್ನು ಓದಿ