ಶ್ರೀಲಂಕಾವನ್ನು 7 ವಿಕೆಟ್ನಿಂದ ಸದೆಬಡಿದ ಭಾರತ

ಸೋಮವಾರ, 19 ಜುಲೈ 2021 (11:13 IST)
ಕೊಲಂಬೋ: ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿತು. ನಿನ್ನೆ ಮುಕ್ತಾಯಗೊಂಡ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಜಯಭೇರಿ ಭಾರಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ ಕೇವಲ 37ನೇ ಓವರ್ನಲ್ಲೇ ಗುರಿ ಮುಟ್ಟಿತು. ಇಂದು ಕ್ರೀಸ್ಗೆ ಇಳಿದ ಎಲ್ಲಾ ಐದು ಭಾರತೀಯ ಬ್ಯಾಟುಗಾರರೂ ಗಮನಾರ್ಹ ಪ್ರದರ್ಶನ ನೀಡಿದರು.

ಶಿಖರ್ ಧವನ್ ಮತ್ತು ಇಶಾನ್ ಕಿಶಾನ್ ಅಮೋಘ ಅರ್ಧ ಶತಕ ಭಾರಿಸಿದರು. ಅಜೇಯರಾಗಿ ಉಳಿದ ಧವನ್ ಕೇವಲ 14 ರನ್ಗಳಿಂದ ಶತಕವಂಚಿತರಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ಬ್ಯಾಟ್ಸ್ಮನ್ಗಳ ಪ್ರದರ್ಶನ ಕಳಪೆಯಾಗಿರದಿದ್ದರೂ ಸಾಧಾರಣ ಎನಿಸಿತ್ತು. ನಿರಂತರವಾಗಿ ವಿಕೆಟ್ಗಳು ಉರುಳುತ್ತಿದ್ದುದು ತಂಡದ ಇನ್ನಿಂಗ್ಸ್ನ ರನ್ ಗತಿಗೆ ಕಡಿವಾಣ ಬಿದ್ದಿತು. ಒಮ್ಮೆಯೂ ದೊಡ್ಡ ಜೊತೆಯಾಟ ಬರಲಿಲ್ಲ. ಮೊದಲ ವಿಕೆಟ್ಗೆ ಹಾಗೂ ಐದನೇ ವಿಕೆಟ್ಗೆ 49 ರನ್ಗಳ ಜೊತೆಯಾಟ ಬಂದಿದ್ದೇ ಹೆಚ್ಚು. ಆರು ಆಟಗಾರರು ಇಪ್ಪತ್ತಕ್ಕಿಂತ ಹೆಚ್ಚು ರನ್ ಗಳಿಸಿದರೂ ಒಬ್ಬರೂ ಅರ್ಧಶತಕ ಗಳಿಸಲಿಲ್ಲ.
ಭಾರತದ ಬೌಲರ್ಗಳಾದ ಕೃಣಾಲ್ ಪಾಂಡ್ಯ, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ದೀಪಕ್ ಚಹರ್ ಎದುರಾಳಿ ಬ್ಯಾಟುಗಾರರಿಗೆ ಹೆಚ್ಚು ರನ್ ಗಳಿಸಿದಂತೆ ಕಟ್ಟಿಹಾಕಿದರು. ಚಹರ್, ಚಹಲ್ ಮತ್ತು ಕುದೀಪ್ ಅವರು ತಲಾ 2 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಲಂಕಾ ಇನ್ನಿಂಗ್ಸ್ 262 ರನ್ಗೆ ಸೀಮಿತಗೊಂಡಿತು.
ಬ್ಯಾಟಿಂಗ್ ಸ್ವರ್ಗ ಎನಿಸಿದ ಪಿಚ್ನಲ್ಲಿ ಲಂಕಾ ಗಳಿಸಿದ ಮೊತ್ತ ಸಾಧಾರಣವಾಗಿತ್ತು. ಭಾರತದ ಪೃಥ್ವಿ ಶಾ ಕೇವಲ 24 ಬಾಲ್ನಲ್ಲಿ 43 ರನ್ ಗಳಿಸಿ ತಂಡದ ಚೇಸಿಂಗ್ಗೆ ಸ್ಫೋಟಕ ಆರಂಭ ತಂದರು. ನಂತರ ಬಂದ ಇಶಾನ್ ಕಿಶನ್ ಮತ್ತು ನಾಯಕ ಶಿಖರ್ ಧವನ್ ಜೊತೆಗೂಡಿ 2ನೇ ವಿಕೆಟ್ಗೆ 85 ರನ್ ಕಲೆಹಾಕಿದರು. ಆಗಲೇ ಭಾರತದ ಗೆಲುವಿನ ಸಾಧ್ಯತೆ ಬಹುತೇಕ ನಿಚ್ಚಳಗೊಂಡಿತ್ತು. ಇಶಾನ್ ಕಿಶನ್ 59 ರನ್ ಗಳಿಸಿ ನಿರ್ಗಮಿಸಿದ ಬಳಿಕ ಬಂದ ಮನೀಶ್ ಪಾಂಡೆ ಮತ್ತು ಸೂರ್ಯ ಕುಮಾರ್ ಅವರು ಧವನ್ ಜೊತೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿ ಸುಲಭವಾಗಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.
ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ ಮೊದಲ ಮುನ್ನಡೆ ಪಡೆಯಿತು. ಎರಡನೇ ಪಂದ್ಯ ಇದೇ ಕೊಲಂಬೋದಲ್ಲಿ ನಾಳೆ ಮಂಗಳವಾರ ನಡೆಯಲಿದೆ. ಏಕದಿನ ಕ್ರಿಕೆಟ್ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಕೂಡ ನಡೆಯಲಿದೆ. ಇದೇ ವೇಳೆ ಇಂಗ್ಲೆಂಡ್ನಲ್ಲಿ ಭಾರತದ ಮತ್ತೊಂದು ತಂಡ ಟೆಸ್ಟ್ ಪ್ರವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಲಂಕಾ ಪ್ರವಾಸಕ್ಕೆ ಭಾರತ ಪ್ರತ್ಯೇಕ ತಂಡವನ್ನ ಕಳುಹಿಸಿದೆ. ಇದು ಎರಡನೇ ದರ್ಜೆ ತಂಡ ಎಂದು ಲಂಕಾದ ಮಾಜಿ ಕ್ರಿಕೆಟಿಗರೊಬ್ಬರು ಇತ್ತೀಚೆಗೆ ವ್ಯಂಗ್ಯ ಮಾಡಿದ್ದರು. ಇದಕ್ಕೆ ಭಾರತ ತಂಡ ತನ್ನ ಆಟದ ಮೂಲಕ ತಕ್ಕ ತಿರುಗೇಟು ನೀಡಿದೆ.
ಸ್ಕೋರು ವಿವರ:
ಶ್ರೀಲಂಕಾ 50 ಓವರ್ನಲ್ಲಿ 262/9
(ಚಮಿಕಾ ಕರುಣಾರತ್ನೆ ಅಜೇಯ 43, ದಾಸುನ್ ಶನಕ 39, ಚರಿತ್ ಅಸಲಂಕಾ 38, ಅವಿಷ್ಕಾ ಫರ್ನಾಂಡೋ 33, ಮಿನೋದ್ ಭನುಕ 27, ಶನುಕ ರಾಜಪಕ್ಸ 24 ರನ್ – ದೀಪಕ್ ಚಹರ್ 37/2, ಕುಲದೀಪ್ ಯಾದವ್ 48/2, ಯುಜವೇಂದ್ರ ಚಹಲ್ 52/2)
ಭಾರತ 36.4 ಓವರ್ 263/3
(ಶಿಖರ್ ಧವನ್ ಅಜೇಯ 86, ಇಶಾನ್ ಕಿಶನ್ 59, ಪೃಥ್ವಿ ಶಾ 43, ಸೂರ್ಯಕುಮಾರ್ ಯಾದವ್ ಅಜೇಯ 31, ಮನೀಶ್ ಪಾಂಡೆ 26 ರನ್ – ಧನಂಜಯ ಡಿಸಿಲ್ವ 49/2

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ