ಧನಾತ್ಮಕ, ಆಕ್ರಮಣಶೀಲ ಪ್ರದರ್ಶನ ನೀಡಿದ ತಂಡವನ್ನು ಕೊಂಡಾಡಿದ ವಿರಾಟ್ ಕೊಹ್ಲಿ

ಸೋಮವಾರ, 17 ನವೆಂಬರ್ 2014 (17:12 IST)
ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರವಾಸಿ ಶ್ರೀಲಂಕಾವನ್ನು ಕ್ಲೀನ್‌ ಸ್ವೀಪ್ ಮಾಡುವ ಮೂಲಕ ಭರ್ಜರಿಯಾಗಿ ಸರಣಿ ಗೆದ್ದ ತಮ್ಮ ತಂಡದ ಧನಾತ್ಮಕ ಮತ್ತು ಆಕ್ರಮಣಶೀಲ ಪ್ರದರ್ಶನವನ್ನು ನಾಯಕ ಕೊಹ್ಲಿ ಮನಸಾರೆ ಕೊಂಡಾಡಿದ್ದಾರೆ. 

ಕಳೆದ ರಾತ್ರಿ ಮುಕ್ತಾಯ ಕಂಡ ಅಂತಿಮ ಪಂದ್ಯದಲ್ಲಿ ಮೂರು ವಿಕೆಟ್ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಶ್ರೀಲಂಕಾವನ್ನು 5-0 ಅಂತರದಿಂದ ಮಣ್ಣು ಮುಕ್ಕಿಸಿತು. 
 
ಪಂದ್ಯದ ನಂತರ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಕೊಹ್ಲಿ "ರಕ್ಷಣಾತ್ಮಕ ಮತ್ತು ನಕಾರಾತ್ಮಕ ಧೋರಣೆಯನ್ನು ಕಳಚಿದ ನಮ್ಮ ಹುಡುಗರು ಧನಾತ್ಮಕ ಮತ್ತು ಆಕ್ರಮಣಕಾರಿ ಆಟಕ್ಕೆ ಮಹತ್ವ ನೀಡಿದರು. ಆದ್ದರಿಂದ ನಾವು ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಯಿತು. ಬ್ಯಾಟ್ಸಮೆನ್‌ನಿಂದ ದಂಡಿಸಿಕೊಳ್ಳುತ್ತಿದ್ದರೂ ಬೌಲರ್ ವಿಕೆಟ್ ಪಡೆದುಕೊಳ್ಳುವತ್ತ ಗಮನ ನೀಡಬೇಕೆ, ವಿನಃ ಹತಾಶೆಯಿಂದ ಕೈ ಚೆಲ್ಲಬಾರದು. ಆ ಬದಲಾವಣೆ ನಮ್ಮ ತಂಡಕ್ಕೆ ಅಗತ್ಯವೆನಿಸಿದೆ" ಎಂದ ಹೇಳಿದರು. 
 
"ಈ ರೀತಿಯ ಕೆಲ ಯೋಜನೆಗಳನ್ನೇ ನಾವು ಈ ಸರಣಿ ಸಮಯದಲ್ಲಿ  ರೂಪಿಸಿದ್ದೆವು. ಮತ್ತದು ಪರಿಣಾಮಕಾರಿಯಾಗಿ ಬಳಕೆಯಾಯಿತು" ಎಂದು ವಿರಾಟ್ ತಿಳಿಸಿದ್ದಾರೆ. 
 
ಹೊಸ ಶೈಲಿಯ ಆಕ್ರಮಣಕ್ಕೆ ಒತ್ತು ನೀಡಿದ ಬಗ್ಗೆ ಮಾತನಾಡಿದ ಕೊಹ್ಲಿ ಉಪ ಖಂಡದ ಪ್ರತಿಸ್ಪರ್ಧಿಯನ್ನು ನಿರಾಯಾಸವಾಗಿ ಸೋಲಿಸುವುದು ಸವಾಲಿನ ಸಂಗತಿಯಾಗಿತ್ತು ಎಂದು  ಹೇಳಿದರು. 
 
"ಕ್ಲೀನ್‌ ಸ್ವೀಪ್ ಗೆಲುವು ದಾಖಲಿಸುವುದು ಅದು ವಿಶೇಷವಾಗಿ, ಉಪಖಂಡದ ಸಹ ತಂಡದ ವಿರುದ್ಧ ಉಪಖಂಡದಲ್ಲೇ!  ನಿಜಕ್ಕೂ ಸುಲಭದ ಮಾತಲ್ಲ. ಇದು  ತುಂಬಾ ಕಷ್ಟದ ವಿಷಯ. ನಾನು ಬಯಸಿದ ರೀತಿಯಲ್ಲೇ ಪ್ರತಿಕ್ರಿಯಿಸಿದ ನಮ್ಮ ತಂಡದ ಹುಡುಗರ  ಆಟದ ಬಗ್ಗೆ ನಿಜಕ್ಕೂ ಸಂತೋಷವಾಗುತ್ತಿದೆ. ತಂಡದ ನಾಯಕನಾಗಿ ನನಗಿ ವಿಜಯ ತೃಪ್ತಿ ತಂದಿದೆ "ಎಂದು ಕೊಹ್ಲಿ ತಮ್ಮ ತಂಡದ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. 

ವೆಬ್ದುನಿಯಾವನ್ನು ಓದಿ