ಕ್ರಿಕೆಟ್; ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾಗೆ ವಿಶ್ರಾಂತಿ

ಭಾನುವಾರ, 16 ನವೆಂಬರ್ 2014 (12:38 IST)
ರಾಂಚಿ ಏಕದಿನ ಪಂದ್ಯಕ್ಕಾಗಿ ಆಡುವ ಬಳಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಮುಳುಗಿರುವ ಭಾರತ, ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
 
ಆದರೆ ರೈನಾ ಸ್ಥಾನದಲ್ಲಿ ಯಾರು ಕಾಣಿಸಿಕೊಳ್ಳಬಹುದೆಂಬುದನ್ನು ತಂಡದ ಆಡಳಿತ ಮಂಡಳಿ ತಿಳಿಸಿಲ್ಲ. ಕಳೆದ ರಣಜಿ ಋತುವಿನಲ್ಲಿ ರನ್‌ ಪ್ರವಾಹ ಹರಿಸಿದ ಮಹಾರಾಷ್ಟ್ರದ ಬಲಗೈ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ ಅವಕಾಶ ಪಡೆಯುವ ನಿರೀಕ್ಷೆ ಇದೆ. ಆಗ ಇದು ಜಾಧವ್‌ ಅವರ ಪದಾರ್ಪಣಾ ಪಂದ್ಯವಾಗಲಿದೆ.
 
52 ಪ್ರಥಮ ದರ್ಜೆ ಪಂದ್ಯಗಳಲ್ಲಿ 10 ಶತಕಗಳ ಸಹಿತ 3,671 ರನ್‌ ಪೇರಿಸಿರುವ 29ರ ಹರೆಯದ ಜಾಧವ್‌ ಕೊನೆಯ ಎರಡು ಪಂದ್ಯಗಳಿಗಾಗಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಕೋಲ್ಕತಾದಲ್ಲಿ ಅವರಿಗೆ ಆಡುವ ಅವಕಾಶ ಲಭಿಸಲಿಲ್ಲ.
 
ತಂಡದ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌, 'ಯಾರಿಗೂ ಅವಕಾಶ ಇಲ್ಲದಂತಾದೀತು ಎಂದು ನನಗನಿಸುವುದಿಲ್ಲ. ಇಲ್ಲಿ ಎಲ್ಲರಿಗೂ ಆಡುವ ಅವಕಾಶ ಇದೆ. ರಾಂಚಿ ಪಂದ್ಯದಲ್ಲಿ ಸುರೇಶ್‌ ರೈನಾ ಆಡುವುದಿಲ್ಲ, ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈವರೆಗೆ ಆಡದವರಿಗೆ ಇಲ್ಲಿ ಉತ್ತಮ ಅವಕಾಶವಿದೆ...' ಎಂದಿದ್ದಾರೆ.
 
ಮುಂದಿನ ವರ್ಷದ ವಿಶ್ವಕಪ್‌ಗಾಗಿ ತಂಡದ ಬಲಪರೀಕ್ಷೆ ನಡೆಸುವುದು ಟೀಮ್‌ ಇಂಡಿಯಾದ ಪ್ರಮುಖ ಉದ್ದೇಶ. ಇದಕ್ಕಾಗಿ ತಂಡದ ಎಲ್ಲ ಆಟಗಾರರಿಗೂ ಆಡುವ ಬಳಗದಲ್ಲಿ ಅವಕಾಶ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆರ್‌. ವಿನಯ್‌ ಕುಮಾರ್‌ ಕೂಡ ತಂಡ ಪ್ರವೇಶಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ