ಅಲ್ಲಿ ಬಾಂಬ್‌ಗಳ ಬದಲು ಪಟಾಕಿ ಶಬ್ದ ಕೇಳುತ್ತಿದೆ..!

ಸೋಮವಾರ, 22 ಜೂನ್ 2009 (13:48 IST)
ಲಾರ್ಡ್ಸ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಂಡಿರುವ ಯೂನಿಸ್ ಖಾನ್ ಬಳಗದ ಜಯಭೇರಿಯನ್ನು ಪಾಕಿಸ್ತಾನದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಭಾನುವಾರ ರಾತ್ರಿಯಿಂದಲೇ ಅಭಿಮಾನಿಗಳು ಬೀದಿಗಿಳಿದು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟಾಕಿ ಸಿಡಿಸಿ ಬೀದಿ ಬೀದಿಗಳಲ್ಲಿ ತಮ್ಮ ಸಂತೋಷವನ್ನು ಆಚರಿಸಿಕೊಂಡಿದ್ದಾರೆ.

ಹಲವು ವರ್ಷಗಳಿಂದ ರಕ್ತದೋಕುಳಿಯಲ್ಲೇ ಸ್ನಾನ ಮಾಡುತ್ತಿರುವ ಪಾಕ್ ಜನತೆಗಿದೊಂದು ಅಪೂರ್ವ ಸಂತಸದ ಕ್ಷಣ. ಪ್ರತಿ ದಿನವೂ ಭೀತಿಯ ನೆರಳಲ್ಲೇ ಬದುಕು ಸಾಗಿಸುವವರ ಮುಖದಲ್ಲೊಂದು ಮಿಂಚು ನಿನ್ನೆಯಿಂದ ಕಾಣಿಸುತ್ತಿದೆ.

1992ರಲ್ಲಿ ವಿಶ್ವಕಪ್ ಗೆದ್ದ ನಂತರ ಮತ್ತೊಮ್ಮೆ 'ಪಾಕಿಸ್ತಾನ ಕ್ರಿಕೆಟ್ ಟೀಮ್ ಜಿಂದಾಬಾದ್' ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ. ನಿನ್ನೆ ಪಾಕಿಸ್ತಾನವು ಜಯಭೇರಿ ಬಾರಿಸುತ್ತಿದ್ದಂತೆ ಲಾಹೋರ್, ಇಸ್ಲಾಮಾಬಾದ್, ಕರಾಚಿ ಸೇರಿದಂತೆ ಹಲವಡೆ ಬೃಹತ್ ಪ್ರಮಾಣದಲ್ಲಿ ಸುಡುಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು ಎಂದು ವರದಿಯಾಗಿದೆ.

"ನಮಗೆಲ್ಲರಿಗೂ ಇದೊಂದು ಐತಿಹಾಸಿಕ ಕ್ಷಣ. ಈ ಹೊತ್ತಿನಲ್ಲಿ ಯೂನಿಸ್ ಮತ್ತವರ ಹುಡುಗರು ಇದಕ್ಕಿಂತ ಹೆಚ್ಚಿನ ಕೊಡುಗೆಯನ್ನೇನೂ ನೀಡಲಾಗದು" ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಷೀದ್ ಲತೀಫ್ ಸಂತಸವನ್ನು ಹಂಚಿಕೊಳ್ಳುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವಾತ್ ಕಣಿವೆ ಮತ್ತು ಇತರ ಬುಡಕಟ್ಟು ಪ್ರದೇಶಗಳಲ್ಲಿ ಉಗ್ರಗಾಮಿಗಳ ವಿರುದ್ಧ ಪಾಕಿಸ್ತಾನ ಸೇನೆಯು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಕ್ರಿಕೆಟ್ ಚಾಂಪಿಯನ್ ಆದ ಸುದ್ದಿಯೂ ಬಂದಿರುವುದರಿಂದ ಭೀತಿಯ ಜಾಗದಲ್ಲಿ ಕೊಂಚ ಸಂತೋಷಕ್ಕೂ ಜಾಗ ಸಿಕ್ಕಿದಂತಾಗಿದೆ.

"ಇಂತಹ ಒಂದು ಶುಭಘಳಿಗೆಗಾಗಿ ನಾವು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದೇವೆ. ಕಳೆದ ಫೈನಲ್‌ನಲ್ಲಿ ನಾವು ಭಾರತ ವಿರುದ್ಧ ಸೋತದ್ದು ತುಂಬಾ ನೋವು ತಂದಿತ್ತು. ಈಗ ನಮ್ಮ ಆಟಗಾರರು ಸಂಭ್ರಮಿಸಲು ಭರಪೂರ ಕಾರಣವನ್ನು ನೀಡಿದ್ದಾರೆ" ಎಂದು ಇಲ್ಲಿನ ಪಾನ್ ಅಂಗಡಿಯ ಮಾಲಕ ಅಬ್ಲುಲ್ಲಾ ಪಟಾಕಿ ಸಂಭ್ರಮದ ನಡುವೆ ತಿಳಿಸಿದರು.

ಶ್ರೀಲಂಕಾ ಆಟಗಾರರ ಬಸ್ ಮೇಲೆ ದಾಳಿ ನಡೆದಾಗ ಭದ್ರತಾ ಸಿಬಂದಿಯಾಗಿ ಕಾರ್ಯನಿರ್ವಹಿಸಿದ್ದ ಖಲೀಲ್ ಲಾಹೋರ್‌ನಲ್ಲಿ ಭಾರೀ ಸಂಖ್ಯೆಯ ಜನರ ನಡುವೆ ಬೃಹತ್ ಪರದೆಯಲ್ಲಿ ಪಂದ್ಯವನ್ನು ವೀಕ್ಷಿಸಿದ ನಂತರ ಪಾಕಿಸ್ತಾನದ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. "ಶ್ರೀಲಂಕಾ ನಮ್ಮ ಗೆಳೆಯ. ಅದು ಹಾಗೆಯೇ ಉಳಿಯುತ್ತದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕೆಂಬುದು ನನ್ನ ಆಸೆಯಾಗಿತ್ತು" ಎಂದಿದ್ದಾರೆ.

ಶ್ರೀಲಂಕಾ ಪ್ರತಿ ವಿಕೆಟ್ ಕಳೆದುಕೊಂಡಾಗಲೂ ಪಾಕಿಸ್ತಾನದಲ್ಲಿನ ಹೊಟೇಲ್, ರೆಸ್ಟೋರೆಂಟ್‌ಗಳು, ಬೀದಿ, ಮನೆಗಳಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಹಲವು ಕಡೆ ಬೃಹತ್ ಪರದೆಗಳಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಉಳಿದಂತೆ ಟೀವಿಯಲ್ಲೇ ಪಂದ್ಯವನ್ನು ಅಭಿಮಾನಿಗಳು ನೋಡುತ್ತಿದ್ದರು.

ದೇಶದ ಬಹುತೇಕ ಟೀವಿ ಚಾನೆಲ್‌ಗಳು ಪಂದ್ಯ ಮುಗಿಯುವವರೆಗೆ ನೇರ ಪ್ರಸಾರದ ತುಣುಕುಗಳನ್ನು, ವಿವರಣೆಗಳನ್ನು ಬಗೆ ಬಗೆಯಾಗಿ ನೀಡುತ್ತಾ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಜನತೆ ಬಾಂಬ್, ಫಿರಂಗಿಗಳ ಶಬ್ದಗಳಿಂದ ಭೀತರಾಗಿ ಕಾಲ್ಕೀಳುವ ಪ್ರದೇಶಗಳಲ್ಲೂ ಇದೀಗ ಪಟಾಕಿ, ಸುಡುಮದ್ದುಗಳ ಕೇಕೆ ಕೇಳಿ ಬರುತ್ತಿದೆ. ರಕ್ತ ಹರಿದಾಡುವ ನೆಲದಲ್ಲೀಗ ಬಣ್ಣ-ಬಣ್ಣದ ಚಿತ್ತಾರಗಳು ಮೂಡುತ್ತಿವೆ. ಯೂನಿಸ್ ಖಾನ್ ಬಳಗಕ್ಕೆ ಅದರಲ್ಲೂ ವಿಶೇಷವಾಗಿ ಶಾಹಿದ್ ಆಫ್ರಿದಿಯ ಹೋರಾಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ.
pti