ಶಕ್ತಿ ಯೋಜನೆ ಎಫೆಕ್ಟ್ : ದೇವಾಲಯಗಳಿಗೆ ಡಬಲ್ ಆದಾಯ

ಭಾನುವಾರ, 20 ಆಗಸ್ಟ್ 2023 (11:46 IST)
ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದಿರುವುದು ಶಕ್ತಿ ಯೋಜನೆ. ಈ ಯೋಜನೆಗೆ ಅಭೂತಪೂರ್ವ ಮಹಿಳಾ ಬೆಂಬಲ ದೊರೆತಿದ್ದು ಉಚಿತ ಪ್ರಯಾಣದ ಕಾರಣದಿಂದ ದೇವಾಲಯಗಳ ಆದಾಯವೂ ಹೆಚ್ಚಾಗಿದೆ.
 
ಪ್ರವಾಸಿ ತಾಣಗಳು ಸಹ ರಶ್ ಆಗುತ್ತಿವೆ. ಶಕ್ತಿ ಯೋಜನೆಯಿಂದ ದೇವಾಲಯಗಳಿಗೆ ಹರಿದು ಬರುತ್ತಿರುವ ಆದಾಯ ದ್ವಿಗುಣಗೊಂಡಿದೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳಾಗಿದೆ. ಸಾರಿಗೆ ನಿಗಮಗಳ ಬಸ್ನಲ್ಲಿ ಉಚಿತ ಪ್ರಯಾಣದ ಲಾಭವನ್ನ ಮಹಿಳೆಯರು ಬಹಳ ಸಂತೋಷದಿಂದ ಅನುಭವಿಸುತ್ತಿದ್ದಾರೆ. ಉಚಿತ ಪ್ರಯಾಣದಿಂದಾಗಿ ಸಾರಿಗೆ ನಿಗಮಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳಿಗೂ ಲಾಭ ಶುರುವಾಗಿದೆ.
 -
ಶಕ್ತಿ ಯೋಜನೆಯಿಂದ ಭಗವಂತನ ಖಜಾನೆಗೆ ಕೋಟಿ ಕೋಟಿ ಕಾಸು ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಯಾಗಿ ಇದೇ ಮೊದಲ ಬಾರಿಗೆ ಹುಂಡಿ ಹಣ ಲೆಕ್ಕ ಹಾಕಲಾಗಿದೆ. ಅಲ್ಲದೆ ಜೂನ್ 11 ರಿಂದ ಜುಲೈ 15ರ ವರೆಗಿನ ತಮ್ಮ ವ್ಯಾಪ್ತಿಯ ದೇವಾಲಯಗಳ ಹುಂಡಿ ಹಣ ತುಲನೆ ಮಾಡಿದೆ ಮುಜರಾಯಿ ಇಲಾಖೆ. ಈ ವೇಳೆ 2022ರ ಇದೇ ಅವಧಿಗಿಂತ ಈ ಬಾರಿಯ ಅವಧಿಯಲ್ಲಿ ಹೆಚ್ಚು ಗಳಿಕೆಯಾಗಿರುವ ಮಾಹಿತಿ ಗೊತ್ತಾಗಿದೆ.

2022ರ ಜೂನ್ 11 – ಜುಲೈ 15ರ ಅವಧಿಯಲ್ಲಿ 29.68 (29,68,97,550) ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿಯ ಜೂನ್ 11 – ಜುಲೈ 15ರ ಅವಧಿಯಲ್ಲಿ 39.43 (39,43,60,764) ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹತ್ತು ಕೋಟಿ ಹೆಚ್ಚಿನ ಆದಾಯ ಸಂಗ್ರಹ ದೇವಾಲಯಗಳಲ್ಲಾಗಿದೆ.

ಜೊತೆಗೆ ಈ ಅವಧಿಯಲ್ಲಿ ಜನರ ಭೇಟಿ ಕೂಡ ಹೆಚ್ಚಳವಾಗಿದ್ದು, ಕಳೆದ ಬಾರಿಗಿಂತ 30% ಜನರ ಸಂಖ್ಯೆ ಏರಿಕೆ ಕಂಡಿದೆ. 2022 ಜೂನ್ 11 ರಿಂದ ಜುಲೈ 15ರ ವರೆಗೆ ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ 81.26 ಲಕ್ಷ ಭಕ್ತರು ಭೇಟಿ ಮಾಡಿದ್ದರೆ, 2023 ಜೂನ್ 11 ರಿಂದ ಜುಲೈ 15ರ ವರೆಗೆ 1.42 ಕೋಟಿ ಮಂದಿ ರಾಜ್ಯದ ಮುಜರಾಯಿ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದಿದ್ದಾರೆ. ಈ ಮೂಲಕ ಕೋಟ್ಯಂತರ ಆದಾಯ ಹರಿದು ಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ