ಫೈನಲ್ ಥ್ರಿಲ್ಲರ್ ಗೆದ್ದ ಟೀಂ ಇಂಡಿಯಾ: ಹೀರೋ ಆದ ರವೀಂದ್ರ ಜಡೇಜಾ

ಭಾನುವಾರ, 22 ಡಿಸೆಂಬರ್ 2019 (21:51 IST)
ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅಂತಿಮ ಏಕದಿನ ಪಂದ್ಯವನ್ನು ರೋಚಕವಾಗಿ 4 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಗೆದ್ದು ಸಂಭ್ರಮಿಸಿದೆ.


ಅಂತಿಮ ಕ್ಷಣಗಳಲ್ಲಿ ರೋಚಕ ಹಂತ ತಲುಪಿದ್ದ ಪಂದ್ಯವನ್ನು ರವೀಂದ್ರ ಜಡೇಜಾ ಭಾರತದ ಕಡೆಗೆ ವಾಲುವಂತೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತ್ತು.

ಈ ಮೊತ್ತವನ್ನು ಉತ್ತಮವಾಗಿಯೇ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲಬಹುದು ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ 63 ಮತ್ತು ಕೆಎಲ್ ರಾಹುಲ್ 77 ರನ್ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ನಾಯಕ ಕೊಹ್ಲಿ ಕೂಡಾ ಅಮೋಘ 85 ರನ್ ಸಿಡಿಸಿ ಔಟಾದರು. ಆದರೆ ನಂತರ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೇದಾರ್ ಜಾಧವ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜತೆಯಾದ ರವೀಂದ್ರ ಜಡೇಜಾ ಅದ್ಭುತ ಆಟವಾಡಿ 31 ಎಸೆತಗಳಲ್ಲಿ 39 ರನ್ ಗಳಿಸಿ ಕೊನೆಯವರೆಗೂ ಔಟಾಗದೇ ಉಳಿದರು. ಶ್ರಾದ್ಧೂಲ್ ಠಾಕೂರ್ 17 ರನ್ ಗಳಿಸಿ ಕೊನೆಯ ರೋಚಕ ಕ್ಷಣಗಳಲ್ಲಿ ಜಡೇಜಾಗೆ ಉತ್ತಮ ಸಾಥ್ ನೀಡಿದರು. ಶ್ರಾದ್ಧೂಲ್ ಕೊನೆಯ ಹಂತದಲ್ಲಿ ಹೊಡೆದ ಒಂದು ಸಿಕ್ಸರ್ ನಿಂದಾಗಿ ಭಾರತಕ್ಕೆ ಬಾಲ್ ಮತ್ತು ಗೆಲುವಿನ ರನ್ ಅಂತರ ಕಡಿಮೆಯಾಯಿತು. ಇದರಿಂದಾಗಿ 48.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಭಾರತ 316 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ