ಇಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಗೆಲುವಿಗಾಗಿ 340 ರನ್ನುಗಳ ಸವಾಲಿನ ಮೊತ್ತ ಬೆನ್ನತ್ತಿರುವ ಪ್ರವಾಸಿ ಭಾರತ ತಂಡವು ಟೀ ವಿರಾಮದ ವೇಳೆಗೆ 56 ಓವರುಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದ್ದು, ಪಂದ್ಯ ಡ್ರಾದತ್ತ ಮುಖ ಮಾಡಿದೆ.
ಆಕರ್ಷಕ ಅರ್ಧಶತಕ ಬಾರಿಸಿರುವ ಗೌತಮ್ ಗಂಭೀರ್ ತಂಡಕ್ಕೆ ಮತ್ತೊಮ್ಮೆ ನೆರವಾಗಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜತೆ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸರಣಿಯುದ್ಧಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವೀರೇಂದ್ರ ಸೆಹ್ವಾಗ್ (11) ನಿರ್ಣಾಯಕ ಅಂತಿಮ ಇನ್ನಿಂಗ್ಸ್ನಲ್ಲಿಯೂ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹಾಗೆಯೇ ಸ್ವಲ್ಪ ಹೊತ್ತು ಪ್ರತಿರೋಧ ಒಡ್ಡಿದ ರಾಹುಲ್ ದ್ರಾವಿಡ್ (31) ನಿರ್ಗಮಿಸಿದ್ದಾರೆ.
ಪ್ರಬಲ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಭಾರತ ಈ ಮೊತ್ತವನ್ನು ಬೆನ್ನತ್ತುವಲ್ಲಿ ಯಶಸ್ವಿಯಾದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಗೆಲುವು ದಾಖಲಿಸಲಿದೆ. ಆದರೆ ನಿಧಾನಗತಿಯ ಬ್ಯಾಟಿಂಗ್ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯ ಡ್ರಾದತ್ತ ಮುನ್ನುಗ್ಗುತ್ತಿದೆ.
ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಯಾವುದೇ ಟೆಸ್ಟ್ ಸರಣಿ ಗೆದ್ದುಕೊಂಡಿಲ್ಲ. ಅಷ್ಟೇ ಯಾಕೆ ಸರಣಿ ಸಮಬಲಗೊಳಿಸುವಲ್ಲಿಯೂ ಯಶಸ್ವಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಡ್ರಾ ಮಾಡುವಲ್ಲಿಯೂ ಯಶಸ್ವಿಯಾದರೂ ಅದು ಭಾರತಕ್ಕೆ ಗೆಲುವಿಗೆ ಸಮವಾಗಲಿದೆ.