ಏಕದಿನ ವಿಶ್ವಕಪ್ಗಾಗಿನ ಭಾರತ ತಂಡದಿಂದ ಬಲಗೈ ವೇಗಿ ಎಸ್. ಶ್ರೀಶಾಂತ್ ಕೈಬಿಟ್ಟಿರುವ ಬಗ್ಗೆ ಭಾರತo ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೋಮವಾರ ಆರಿಸಲಾದ 15 ಮಂದಿ ಸದಸ್ಯರ ತಂಡದಿಂದ ಕೇರಳ ವೇಗಿ ಶ್ರೀಶಾಂತ್ ಅವರಿಗೆ ಕೊಕ್ ನೀಡಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಸ್ಮರಣೀಯ ಟೆಸ್ಟ್ ಸರಣಿ ಆಡಿರುವ ಶ್ರೀಶಾಂತ್ ಅವರನ್ನು ಕಡೆಗಣಿಸಿರುವುದಕ್ಕೆ ದಾದಾ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಿನ ಫಾರ್ಮ್ ಪರಿಗಣಿಸಿಯೂ ಶ್ರೀಶಾಂತ್ ಅವರನ್ನು ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದವರು ಹೇಳಿದರು.
ಹಾಗೆಯೇ ತಂಡಕ್ಕೆ ಕೇವಲ ಒಬ್ಬನೇ ವಿಕೆಟ್ ಕೀಪರ್ ಆಯ್ಕೆ ಮಾಡಿರುವ ಬಗ್ಗೆಯೂ ಮಾಜಿ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್ ಮತ್ತು ವೃದ್ಧೀಮಾನ್ ಸಹಾ ಅವಕಾಶ ವಂಚಿತರಾಗಿದ್ದರು.
ನಾಯಕ ಧೋನಿ ತಂಡದಲ್ಲಿರುವ ಏಕೈಕ ವಿಕೆಟ್ ಕೀಪರ್. ಇದರಿಂದ ಆಯ್ಕೆ ಸಮಿತಿ ಸಾಹಸಕ್ಕೆ ಕೈ ಹಾಕಿದೆ. ಒಂದು ವೇಳೆ ಧೋನಿ ಅನುಪಸ್ಥಿತಿ ಕಾಡಿದರೆ ಸ್ಥಿತಿ ಏನಾಗಬಹುದು ಎಂದು ದಾದಾ ಪ್ರಶ್ನಿಸಿದರು.
ಹೀಗಿದ್ದರೂ ರೋಹಿತ್ ಶರ್ಮಾ ಅವರಿಗೆ ಕೊಕ್ ನೀಡಿರುವುದು ಅಚ್ಚರಿ ತಂದಿಲ್ಲ ಎಂದವರು ಹೇಳಿದರು. ಅವರೊಬ್ಬ ಪ್ರತಿಭಾನ್ವಿತ ಆಟಗಾರ. ಆದರೆ ಬೇಕಾದಷ್ಟು ಅವಕಾಶ ಲಭಿಸಿದರ ಹೊರತಾಗಿಯೂ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.
ಯೂಸುಫ್ ಪಠಾಣ್ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ದಾದಾ, ಈ ಆಲ್ರೌಂಡರ್ ಆಟಗಾರ ಕೂಡಾ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರೇ ಶ್ರೇಷ್ಠ ಆಯ್ಕೆಯಾಗಿದ್ದಾರೆ ಎಂದರು.
ಅದೇ ಹೊತ್ತಿಗೆ ವಿಶ್ವಕಪ್ಗೆ ಫೆವರೀಟ್ ತಂಡವನ್ನು ಆಯ್ಕೆ ಮಾಡಲು ಗಂಗೂಲಿ ನಿರಾಕರಿಸಿದರು. ಸದಾ ಒತ್ತಡವು ಅಲ್ಲಿರುತ್ತದೆ. ಪ್ರಸ್ತುತ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಫೆವರೀಟ್ ಎನಿಸಿಕೊಂಡಿದೆ ಎಂದರು.