ವಿಶ್ವಕಪ್‌ ಗೆಲ್ಲಲು ಅಸಾಧಾರಣ ಸ್ಫೂರ್ತಿ, ಫಾರ್ಮ್ ಅಗತ್ಯ: ಗೌತಿ

ಶುಕ್ರವಾರ, 28 ಜನವರಿ 2011 (11:16 IST)
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತೋರಿರುವ ಅಸಾಮಾನ್ಯ ಉತ್ಸಾಹ ಹಾಗೂ ಫಾರ್ಮ್ ಇದ್ದಲ್ಲಿ ಮಾತ್ರ ತವರಿನಲ್ಲಿ ನಡೆಯಲಿರುವ ಮುಂಬರುವ ಪ್ರತಿಷ್ಠಿತ ವಿಶ್ವಕಪ್ ಗೆಲ್ಲಲು ಸಾಧ್ಯ ಎಂದು ಭಾರತದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಭಾರತ ಉತ್ತಮ ನಿರ್ವಹಣೆ ನೀಡಿತ್ತು. ಈ ವರೆಗೆ ನಾವು ಹರಿಣಗಳ ನಾಡಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಪರಿಣಾಮಕಾರಿ ಆಟವಾಡಲು ಯಶಸ್ವಿಯಾಗಿದ್ದೆವು ಎಂದರು.

ಅಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಟೆಸ್ಟ್ ಸರಣಿ ಸಮಬಲ ಮಾಡಲು ಯಶಸ್ವಿಯಾಗಿದ್ದೆವು. ಏಕದಿನ ಸರಣಿ ಗೆಲ್ಲಲಾಗದ ಹೊರತಾಗಿಯೂ ಪ್ರಬಲ ಪೈಪೋಟಿ ನೀಡಿದ್ದು, ಹಾಗೆಯೇ ಏಕೈಕ ಟ್ವೆಂಟಿ-20 ನಮ್ಮ ಪಾಲಾಗಿತ್ತು ಎಂದರು.

ತಂಡ ಇದೇ ಹುಮ್ಮಸ್ಸು ಹಾಗೂ ಫಾರ್ಮ್‌ ಕಂಡುಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ವಿಶ್ವಕಪ್ ಖಂಡಿತವಾಗಿಯೂ ಗೆಲ್ಲಲಿದ್ದೆವೆ ಎಂದು ಗಾಯದಿಂದ ಚೇತರಿಕೆ ಪಡೆಯುತ್ತಿರುವ ಗೌತಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಾನು ಉತ್ತಮ ರೀತಿಯಲ್ಲಿ ಚೇತರಿಕೆ ಪಡೆಯುತ್ತಿದ್ದು, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹತ್ತರ ಕೂಟದ ಬಗ್ಗೆ ಅತೀವ ಉತ್ಸುಕಗೊಂಡಿದ್ದೇನೆ ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ