ಸಚಿನ್ vs ಮುರಳಿ; ಫೈನಲ್‌ನಲ್ಲಿ ದಿಗ್ಗಜರ ಫೈಟ್

ಶುಕ್ರವಾರ, 1 ಏಪ್ರಿಲ್ 2011 (09:16 IST)
ಮುಂಬೈನಲ್ಲಿ ಶನಿವಾರ ನಡೆಯಲಿರುವ ಏಕದಿನ ಫೈನಲ್ ಪಂದ್ಯವು ಹಲವು ರೋಚಕ ಕ್ಷಣಗಳಿಗೆ ಸಾಕ್ಷ್ಮವಹಿಸುವ ನಿರೀಕ್ಷೆಯಿದೆ. ಯಾಕೆಂದರೆ ಕ್ರಿಕೆಟ್‌ನ ಇಬ್ಬರು ಮಹಾ ದಿಗ್ಗಜರು ತಮ್ಮ ತಮ್ಮ ತಂಡಗಳ ಗೆಲುವಿಗಾಗಿ ಹೋರಾಟವನ್ನು ನಡೆಸಲಿದ್ದು, ಬ್ಯಾಟ್-ಬಾಲ್ ನಡುವಣ ಈ ಅವಿಸ್ಮರಣೀಯ ಹೋರಾಟದ ಕ್ಷಣವನ್ನು ಕಣ್ಣಾರೆ ನೋಡುವ ಭಾಗ್ಯವನ್ನು ಅಭಿಮಾನಿಗಳು ಪಡೆಯಲಿದ್ದಾರೆ.

ಭಾರತದ ಸಚಿನ್ ತೆಂಡೂಲ್ಕರ್ ಪಾಲಿಗಿದು ಬಹುತೇಕ ಕೊನೆಯ ವಿಶ್ವಕಪ್. ಅದೇ ರೀತಿ ಈ ಹಿಂದೆಯೇ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದ ಸ್ಪಿನ್ ಮಾತ್ರಿಂಕ ಮುತ್ತಯ್ಯ ಮುರಳೀಧರನ್ ಕೂಡಾ ತಮ್ಮ ಅಂತರಾಷ್ಟ್ರೀಯ ಬಾಳ್ವೆಯ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಇವೆಲ್ಲಕ್ಕೂ ಫೈನಲ್ ಪಂದ್ಯ ನಡೆಯುವ ಮುಂಬೈ ವಾಂಖೆಡೆ ಮೈದಾನ ವೇದಿಕೆವೊದಗಿಸಲಿದೆ.

ಈ ದಿಗ್ಗಜ ಆಟಗಾರರು ತಮ್ಮ ಕೊನೆಯ ವಿಶ್ವಕಪನ್ನು ಗೆಲ್ಲುವ ಮೂಲಕ ಕ್ರಿಕೆಟ್ ಬಾಳ್ವೆಯನ್ನು ಯಶಸ್ವಿಯಾಗಿಯೇ ಕೊನೆಗೊಳಿಸಬೇಕೆಂಬ ಇರಾದೆಯಲ್ಲಿದ್ದಾರೆ. ಹೀಗಾಗಿ ಬ್ಯಾಟ್ ಮತ್ತು ಬಾಲ್ ನಡುವೆ ಪ್ರಬಲ ಪೈಪೋಟಿಯೇ ಕಂಡುಬರಲಿದೆ.

ವಿಶ್ವ ಕ್ರಿಕೆಟ್‌ನಲ್ಲಿ ರನ್ನುಗಳ ಸರದಾರ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾಗಿರುವ ಮುರಳಿ ಅವರಿಂದ ಯಾವ ರೀತಿಯ ಸವಾಲು ಎದುರಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಆದರೆ ಫಿಟ್ನೆಸ್ ಸಮಸ್ಯೆಯು ಮುರಳಿ ಅವರನ್ನು ಹಿನ್ನಡೆಗೆ ತಳ್ಳಿದೆ. ಆದರೆ ನಿರ್ಣಾಯಕ ಹಣಾಹಣಿಗೆ ಲಭ್ಯರಾಗುವ ವಿಶ್ವಾಸವನ್ನು ತಂಡ ಹೊಂದಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000ಕ್ಕೂ (ಟೆಸ್ಟ್-800, ಏಕದಿನ-534) ಹೆಚ್ಚು ವಿಕೆಟ್ ಪಡೆದಿರುವ ಮುರಳೀಧರನ್ ಮುಂದಿನ ತಿಂಗಳು 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮತ್ತೊಂದೆಡೆ 30 ಸಾವಿರಕ್ಕೂ ಹೆಚ್ಚು ರನ್ ಬಾರಿಸಿರುವ ಲಿಟ್ಲ್ ಮಾಸ್ಟರ್ ಕೂಡಾ ಮುಂದಿನ ತಿಂಗಳು 38ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಹಾಗೆಯೇ ತಮ್ಮ ಕ್ರೀಡಾ ಬಾಳ್ವೆಯ 100ನೇ ಶತಕ ಎದುರು ನೋಡುತ್ತಿರುವ ಸಚಿನ್ ಭಾರತಕ್ಕೆ ಅವಿಸ್ಮರಣೀಯ ಜಯ ಒದಗಿಸಿಕೊಡುವಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಇದೀಗಲೇ ಆಡಿರುವ ಎಂಟು ಪಂದ್ಯಗಳಲ್ಲಿ 464 ರನ್ ಗಳಿಸಿರುವ ಸಚಿನ್ ಸರಣಿಶ್ರೇಷ್ಠ ಪ್ರಶಸ್ತಿ ಸ್ಪರ್ಧಾಕಣದಲ್ಲಿದ್ದಾರೆ. ಮತ್ತೊಂದೆಡೆ ಮುರಳೀಧರನ್ ಕೂಡಾ 15 ವಿಕೆಟ್ ಕಬಳಿಸಿದ್ದಾರೆ.

ಒಟ್ಟಾರೆಯಾಗಿ 1996ರಲ್ಲಿ ಕೋಲ್ಕತ್ತಾದಲ್ಲಿ ಲಂಕಾ ವಿರುದ್ಧ ಎದುರಾದ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಭಾರತ ಸಚಿನ್ ಸೆಂಚುರಿ ಮೂಲಕ ಉತ್ತರ ನೀಡಲಿದೆಯೇ ಎಂಬುದು ಬಹಳ ಕುತೂಹಲವೆನಿಸಿದೆ.

ವೆಬ್ದುನಿಯಾವನ್ನು ಓದಿ