ಟಾಸ್ ಗೊಂದಲ; ನಿಜವಾಗಿಯೂ ಟಾಸ್ ಗೆದ್ದಿದ್ದು ಯಾರು?

ಶನಿವಾರ, 2 ಏಪ್ರಿಲ್ 2011 (16:53 IST)
ಭಾರತ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ನಡೆದ 'ಟಾಸ್' ಗೊಂದಲವು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಟಾಸ್ ಪ್ರಕ್ರಿಯೆಯನ್ನು ಎರಡು ಬಾರಿ ಆಳವಡಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀವು ಯಾವತ್ತಾದರೂ ಟಾಸ್ ಎರಡು ಬಾರಿ ಹಾಕಿರುವ ಪ್ರಸಂಗವನ್ನು ವೀಕ್ಷಿಸಿದ್ದೀರಾ? ಹೌದು, ಭಾರತ ಮತ್ತು ಶ್ರೀಲಂಕಾ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿಯೇ ಇಂತಹದೊಂದು ಘಟನೆ ನಡೆದಿತ್ತು.

ಆರಂಭದಲ್ಲಿ ಭಾರತೀಯ ನಾಯಕ ಮಹೇಂದ್ರ ಸಿಂಗ್ ಧೋನಿ ನಾಣ್ಯವನ್ನು ಸ್ಪಿನ್ ಮಾಡಿದರು. ಆದರೆ ಟಾಸ್ ಆಯ್ಕೆ ಬಗ್ಗೆ ಲಂಕಾ ನಾಯಕನಿಂದ ಉಂಟಾದ ಗೊಂದದಿಂದಾಗಿ ಎರಡನೇ ಬಾರಿಗೆ ಟಾಸ್ ಹಾರಿಸಬೇಕಾಗಿ ಬಂದಿತ್ತು.

ಲಂಕಾ ನಾಯಕ 'ಹೆಡ್' ಅಥವಾ 'ಟೈಲ್' ಹೇಳಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ನಂತರ ಧೋನಿ ಮತ್ತು ಸಂಗಕ್ಕರ ನಡುವೆ ಸಣ್ಣ ಮಾತುಕತೆಯೂ ನಡೆಯಿತು. ಕೊನೆಗೆ ಟಾಸ್ ಪುನ ಹಾಕಲು ಮ್ಯಾಚ್ ರೆಫರಿ ನಿರ್ಧರಿಸಿದರು.

ನಂತರ ಎರಡನೇ ಬಾರಿಗೆ ಟಾಸ್ ಹಾಕಿದಾಗ ಲಂಕಾ ನಾಯಕ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾದರು. ನಂತರ ನಿರೀಕ್ಷೆಯಂತೆಯೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಆದರೆ ಆರಂಭದಲ್ಲಿ ಧೋನಿ ಟಾಸ್ ಗೆದ್ದಿದ್ದಾರೆಯೇ? ಎಂಬುದು ಇದೀಗ ಚರ್ಚೆಯ ವಿಷಯ. ಇಬ್ಬರು ನಾಯಕರುಗಳಲ್ಲಿ ಒಬ್ಬಾತನಿಗೆ ಟಾಸ್ ಸೋತಿರುವ ವಿಚಾರ ಗೊತ್ತಿತ್ತು. ಆದರೆ ಅದನ್ನು ಬಹಿರಂಗಪಡಿಸಲಿಲ್ಲ. ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿದ್ದರಿಂದ ಇತ್ತಂಡಗಳ ನಾಯಕರಿಗೆ ಟಾಸ್ ಸೋಲುವುದು ಇಷ್ಟವಿರಲಿಲ್ಲ. ಹೀಗಾಗಿ ಮೌನ ವಹಿಸಿದ್ದರು.

ವೆಬ್ದುನಿಯಾವನ್ನು ಓದಿ