ಯುವಿ ಅವರ ಆ ವಿಶೇಷ ವ್ಯಕ್ತಿ ಯಾರು ಗೊತ್ತೆ?

ಸೋಮವಾರ, 4 ಏಪ್ರಿಲ್ 2011 (15:10 IST)
PTI
ವಿಶೇಷ ವ್ಯಕ್ತಿಯೊಬ್ಬರನ್ನು ಮನದಲ್ಲಿಟ್ಟುಕೊಂಡು ನಾನು ಈ ವಿಶ್ವಕಪ್ ಆಡುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡುವ ಮೂಲಕ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದರು.

ಈ ವಿಶೇಷ ವ್ಯಕ್ತಿ ಯಾರು ಆಗಿರಬಹುದು ಎಂಬುದರ ಬಗ್ಗೆ ಭಾರಿ ಊಹಾಪೋಹಗಳು ಎದ್ದಿದ್ದವು. ಯುವಿ ಪ್ರೇಯಸಿಯಾಗಿರಬಹುದೇ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಇದೀಗ ಆ ವಿಶೇಷ ವ್ಯಕ್ತಿ ಯಾರೆಂಬುದನ್ನು ಸ್ವತ: ಯುವಿ ಬಹಿರಂಗಪಡಿಸಿದ್ದು, ಅದು ಕ್ರಿಕೆಟ್‌ನ ಆರಾಧ್ಯ ದೈವ ನಮ್ಮೆಲ್ಲರ ನೆಚ್ಚಿನ ಆಟಗಾರ ಸಚಿನ್ ತೆಂಡೂಲ್ಕರ್ ಎಂದಿದ್ದಾರೆ.

ವೆರಿ ವೆರಿ ಸಾರಿ; ನಿಮ್ಮನ್ನು ನಿರಾಸೆಗೊಳಪಡಿಸಿದ್ದಕ್ಕೆ ಖೇದಿಸುತ್ತೇನೆ. ಆದರೆ ಅದು ನನ್ನ ಪ್ರೇಯಸಿಯಲ್ಲ, ಬದಲಾಗಿ ಸಚಿನ್ ತೆಂಡುಲ್ಕರ್ ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ತನ್ನ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇರಿಸಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶೇಷ ಧನ್ಯವಾದ ಸಮರ್ಪಿಸಿದರು.

ನನ್ನ ಕ್ಯಾರಿಯರ್‌ನಲ್ಲಿ ಹಲವು ಬಾರಿ ಏರಿಳಿತಗಳನ್ನು ಕಂಡಿದ್ದೆ. ಆದರೆ ಈ ನಾಯಕರುಗಳು ನನ್ನ ಬೆಂಬಲಕ್ಕೆ ನಿಂತಿದ್ದರು. ನಾಯಕ ಧೋನಿ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ ಎಂದವರು ವಿವರಿಸಿದರು.

ವೆಬ್ದುನಿಯಾವನ್ನು ಓದಿ