ಸ್ವತ: ಸಚಿನ್ ತಮ್ಮಲ್ಲೇ ತಾವೇ ಕೇಳಿಕೊಳ್ಳಲಿ: ನಿವೃತ್ತಿ ಬಗ್ಗೆ ದಾದಾ

ಬುಧವಾರ, 22 ಫೆಬ್ರವರಿ 2012 (02:47 IST)
WD
100ನೇ ಶತಕದ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ ತೀವ್ರ ಒತ್ತಡದಲ್ಲಿ ಕಂಡುಬಂದಿದ್ದರಲ್ಲದೆ ಪ್ರಸಕ್ತ ಸಾಗುತ್ತಿರುವ ಸಿಬಿ ಸಿರೀಸ್ ಪಂದ್ಯಾವಳಿಯಲ್ಲೂ ಮಿಂಚುವಲ್ಲಿ ವಿಫಲವಾಗುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಹೇಳಿಕೆ ಕೊಟ್ಟಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಏಕದಿನ ಕ್ರಿಕೆಟ್ ಆಡಲು ಶಕ್ತರೇ ಎಂಬುದನ್ನು ಸ್ವತ: ಸಚಿನ್ ತಮ್ಮಲ್ಲಿ ತಾವೇ ಪ್ರಶ್ನೆ ಹಾಕಬೇಕು ಎಂದು ಸಲಹೆ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಐದು ಪಂದ್ಯಗಳನ್ನಾಡಿರುವ ಸಚಿನ್ ಕೇವಲ 90 ರನ್ನುಗಳನ್ನಷ್ಟೇ ಗಳಿಸಿದ್ದಾರೆ. ಮಹಾಶತಕದ ಒತ್ತಡ ಸಚಿನ್ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ.

ಏಕದಿನ ಕ್ರಿಕೆಟ್ ಆಡಲು ಶಕ್ತರೇ ಎಂಬುದನ್ನು ಸ್ವತ: ಸಚಿನ್ ತಮ್ಮಲ್ಲಿ ತಾವೇ ಕೇಳಿಕೊಳ್ಳಬೇಕು. ಕಳೆದ 8-9 ತಿಂಗಳಿಂದ ತಂಡದಿಂದ ಹೊರಗುಳಿದಿರುವುದು ಅವರಿಗೆ ನೆರವು ಮಾಡಿದೆಯೇ?, ಓರ್ವ ಏಕದಿನ ಆಟಗಾರನಾಗಿ ನೆರವು ಮಾಡುತ್ತಿದೆಯೇ?, ಅಲ್ಲದೆ ಇದರಿಂದ ಭಾರತೀಯ ತಂಡಕ್ಕೆ ನೆರವಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸಾಧ್ಯವಾಗದ್ದಲ್ಲಿ ಸಚಿನ್ ಬಿಟ್ಟು ಹೋಗಬೇಕು ಎಂದರು.

ಇನ್ನು ಮುಂದಕ್ಕೆ ಮಾತನಾಡಿದ ಗಂಗೂಲಿ, 2015ರ ವಿಶ್ವಕಪ್ ಆಡಲು ಸಾಧ್ಯವೇ ಎಂಬುದನ್ನು ಸಹ ಸಚಿನ್ ತಮ್ಮಲ್ಲಿ ತಾವೇ ಪ್ರಶ್ನಿಸಬೇಕು ಎಂದು ಸೇರಿಸಿದರು. ಅಲ್ಲದೆ ಏಕದಿನಕ್ಕೆ ಸಚಿನ್ ಅವರನ್ನು ಆಯ್ಕೆ ಮಾಡುವ ಮುಖಾಂತರ ಅದು ತಂಡದ ಲಯಕ್ಕೆ ಧಕ್ಕೆಯನ್ನುಂಟುಮಾಡಿದೆ ಎಂದರು.

ತೆಂಡೂಲ್ಕರ್ ಕೆಲವೊಂದು ಸರಣಿ ಹಾಗೂ ಇನ್ನಿತರ ಸರಣಿಯಿಂದ ಹೊರಗುಳಿಯುವ ಪ್ರಕ್ರಿಯೆಯಿಂದ ಇಡೀ ತಂಡದ ಪ್ರದರ್ಶನಕ್ಕೆ ಮಾರಕವಾಗುತ್ತಿದೆ. ಅವರು ಏಕದಿನ ಕ್ರಿಕೆಟ್ ಆಡಲು ದೈಹಿಕ ಕ್ಷಮತೆ ಹೊಂದಿದ್ದಲ್ಲಿ ಸ್ಥಿರವಾಗಿ ಆಡಬೇಕು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಲ್ಲಿ ತಂಡ ಬಿಟ್ಟು ಹೋಗಬೇಕು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸಬೇಕು ಎಂದರು.

ಹಾಗಿದ್ದರೂ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯಾವ ಸಂದರ್ಭದಲ್ಲಿ ನಿವೃತ್ತಿ ಘೋಷಿಸಬೇಕು ಎಂಬುದಕ್ಕೆ ಸ್ವತ: ಸಚಿನ್ ಅವರೇ ನಿರ್ಧರಿಸಬೇಕು. ಯಾರು ಸಹ ಸಚಿನ್ ಅವರಂತೆ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿಲ್ಲ. ಸಚಿನ್ ಅವರಲ್ಲಿ ಬಿಟ್ಟು ಹೋಗುವಂತೆ ಸೂಚಿಸುವ ಹಕ್ಕು ಕೂಡಾ ಆಯ್ಕೆ ಸಮಿತಿಗಿಲ್ಲ ಎಂದು ದಾದಾ ವಿವರಿಸಿದರು.

ವೆಬ್ದುನಿಯಾವನ್ನು ಓದಿ