ಶ್ರೀದೇವಿಗೆ ಆವತ್ತು ಏನಾಗಿತ್ತು? ಸಾವಿನ ರಹಸ್ಯ ಬಹಿರಂಗಪಡಿಸಿದ ಬೋನಿ ಕಪೂರ್

ಭಾನುವಾರ, 4 ಮಾರ್ಚ್ 2018 (09:52 IST)
ಮುಂಬೈ: ಬಾಲಿವುಡ್ ತಾರೆ ಶ್ರೀದೇವಿ ಸಾವು ಆಕಸ್ಮಿಕ ಎಂದಾದರೂ ಆವತ್ತು ಏನಾಗಿತ್ತು ಎಂಬ ಕುತೂಹಲ ಇಂದಿಗೂ ಅಭಿಮಾನಿಗಳಿಗೆ ಉಳಿದುಕೊಂಡಿದೆ. ಇದರ ಬಗ್ಗೆ ಪತಿ ಬೋನಿ ಕಪೂರ್ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವುದನ್ನು ಆಂಗ್ಲ ಮಾಧ್ಯಮವೊಂದು ಪ್ರಸಾರ ಮಾಡಿದೆ.

‘ಮೋಹಿತ್ ಮದುವೆ ಮುಗಿದ ಬಳಿಕ ಮಗಳು ಜಾಹ್ನವಿಗೆ ಶಾಪಿಂಗ್ ಮಾಡಬೇಕೆಂದು ಶ್ರೀದೇವಿ ದುಬೈನಲ್ಲೇ ಉಳಿದುಕೊಂಡರು. ಆದರೆ ಫೆಬ್ರವರಿ 24 ರಂದು ನಾನು ಶ್ರೀದೇವಿಗೆ ಕರೆ ಮಾಡಿದಾಗ ಅವಳು ನಿಮ್ಮನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದಳು. ನಾನೂ ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೆ. ಆದರೆ ದುಬೈಗೆ ಬರುವ ವಿಚಾರ ಸರ್ಪ್ರೈಸ್ ಆಗಿರಲಿ ಎಂದು ಗುಟ್ಟಾಗಿ ಇಟ್ಟೆ.

ಈ ಐಡಿಯಾ ನನಗೆ ಕೊಟ್ಟಿದ್ದು ಮಗಳು ಜಾಹ್ನವಿ. ಅಮ್ಮ ಒಬ್ಬರೇ ಅಲ್ಲಿದ್ದಾರೆ. ಅವಳು ಪಾಸ್ ಪೋರ್ಟ್, ಇತರ ದಾಖಲೆಗಳನ್ನು ಮಿಸ್ ಮಾಡಿಕೊಳ್ಳಬಹುದು ಎಂದು ಜಾಹ್ನವಿ ಆತಂಕ ವ್ಯಕ್ತಪಡಿಸಿದ್ದಳು.

ಹಾಗಾಗಿ ನಾನೂ ಶ್ರೀದೇವಿಗೆ ಗೊತ್ತಾಗದೇ ದುಬೈಗೆ ಹೋದೆ. ನನ್ನಲ್ಲಿದ್ದ ಡುಪ್ಲಿಕೇಟ್ ಕೀ ತೆರದು ಒಳ ಪ್ರವೇಶಿಸಿದೆ. ಆಗ ಅವಳಿಗೆ ನಿಜಕ್ಕೂ ಖುಷಿಯಾಯಿತು. ನಾವಿಬ್ಬರೂ ಅಪ್ಪಿಕೊಂಡು ಮುದ್ದಾಡಿದೆವು. ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ ಮೇಲೆ ಶ್ರೀದೇವಿಗೆ ನಾನು ರೊಮ್ಯಾಂಟಿಕ್ ಡಿನ್ನರ್ ಗೆ ಹೋಗೋಣ ಎಂದೆ. ಹಾಗೆ ನಾನು ಫ್ರೆಶ್ ಆಗಿ ಲಿವಿಂಗ್ ರೂಂಗೆ ಹೋದೆ. ಅವಳು ಬಾತ್ ರೂಂಗೆ ಫ್ರೆಶ್ ಆಗಬೇಕೆಂದು ಹೋದಳು.

ಸ್ವಲ್ಪ ಹೊತ್ತಾದರೂ ಬಾರದೇ ಇದ್ದಾಗ ನಾನು ಬಾಗಿಲು ಬಡಿದೆ. ರೆಸ್ಪಾನ್ಸ್ ಬರಲಿಲ್ಲ. ಅವಳು ಒಳಗಿಂದ ಚಿಲಕ ಹಾಕಿರಲಿಲ್ಲ. ಹಾಗಾಗಿ ಬಾಗಿಲು ತೆರೆದು ಹೋದೆ. ಅಲ್ಲಿನ ದೃಶ್ಯ ನೋಡಿ ದಂಗಾದೆ. ಶ್ರೀದೇವಿ ಬಾತ್ ಟಬ್ ನಲ್ಲಿ ಸಂಪೂರ್ಣವಾಗಿ ಮುಳುಗಿದ್ದಳು. ಚಲನೆ ಇರಲಿಲ್ಲ. ನನ್ನ ಎದೆ ಧಸಕ್ಕೆಂದಿತು’.

‘ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿದ್ದಾಳೆ ಎಂದು ಸ್ನೇಹಿತನಿಗೆ ಹೇಳುವಾಗ ಬೋನಿ ಸ್ವರ ನಡುಗುತ್ತಿತ್ತು. ಶ್ರೀದೇವಿ ಹೇಗೆ ಮುಳುಗಿದರು ಎನ್ನುವುದು ಗೊತ್ತಾಗಲೇ ಇಲ್ಲ. ಮುಳುಗಿ ಸಾವನ್ನಪ್ಪಿದ್ದರೆ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಪಡುವಾಗ ನೀರು ಬಾತ್ ಟಬ್ ನಿಂದ ಹೊರಗೆ ಚೆಲ್ಲಬೇಕಿತ್ತು. ಆದರೆ ಹಾಗಿರಲೇ ಇಲ್ಲ. ಆರಾಮವಾಗಿ ಮಲಗಿದಂತೆ ಶ್ರೀದೇವಿ ಇದ್ದರು. ನಿಜವಾಗಿ ಏನಾಯಿತು ಎಂದೇ ಗೊತ್ತಾಗಲಿಲ್ಲ’ ಎಂದು ಬೋನಿ ಸ್ನೇಹಿತ ಕೋಮಲ್ ನಹ್ತಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ