ಈ ವರ್ಷ ಇನ್ನಷ್ಟು ಉತ್ತೇಜನ ಅನಗತ್ಯ: ಮಾಂಟೆಕ್

ಮಂಗಳವಾರ, 7 ಜುಲೈ 2009 (13:02 IST)
2009-10ರ ಸಾಲಿನ ಕೇಂದ್ರ ಬಜೆಟನ್ನು ಪ್ರಗತಿಯಾಧರಿತ ಎಂದಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಪ್ರಸಕ್ತ ಆರ್ಥಿಕ ಸ್ಥಿತಿಗೆ ಇನ್ನಷ್ಟು ಉತ್ತೇಜನದ ಅಗತ್ಯವಿಲ್ಲ ಎಂದಿದ್ದಾರೆ.

"ಭತ್ಯೆ ತೆರಿಗೆಯನ್ನು ವಾಪಸು ಪಡೆದಿರುವುದಕ್ಕೆ ಕಾರ್ಪೊರೇಟ್ ವಲಯವು ಸಂತೋಷಪಡಬೇಕು. ಈ ವರ್ಷ ಇನ್ನೂ ಉತ್ತೇಜನಕಾರಿಯಾದ ಯಾವುದೇ ಅಂಶಗಳು ಅಗತ್ಯವಿದೆ ಎಂದು ನನಗನ್ನಿಸುವುದಿಲ್ಲ" ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಬಜೆಟ್ ಮಂಡಿಸಿದ ನಂತರ ಮಾತನಾಡುತ್ತಾ ಮಾಂಟೆಕ್ ತಿಳಿಸಿದ್ದಾರೆ.

"ಮುಖರ್ಜಿಯವರು ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಒದಗಿಸಲಾಗಿರುವ ಸಂಪನ್ಮೂಲಗಳ ಸಮರ್ಥ ಬಳಕೆ ಮಾಡುವಲ್ಲಿ ಶ್ರಮವಹಿಸಬೇಕು" ಎಂದು ಮಾಂಟೆಕ್ ಅಭಿಪ್ರಾಯಪಟ್ಟರು.

ಸಂಕಷ್ಟದ ಸಂದರ್ಭದಲ್ಲಿ ಹಣಕಾಸು ಸಚಿವರು ಮಂಡಿಸಿರುವ ಆಯವ್ಯಯ ಪತ್ರವು ಅತ್ಯುತ್ತಮವಾಗಿದೆಯೆಂದು ಬೊಟ್ಟು ಮಾಡಿದ ಅವರು, "ಇದು ಪ್ರಗತಿಯನ್ನಾಧರಿಸಿದ ಬಜೆಟ್. ಮಧ್ಯಂತರ ಬಜೆಟ್‌ಗೆ ನಾವು ಹೋಲಿಸಿದಾಗ ರಾಜ್ಯಗಳು ಸೇರಿದಂತೆ ಕೇಂದ್ರದಲ್ಲಿ ಒಟ್ಟು ದೇಶೀಯ ಉತ್ಪಾದನೆಯ ಶೇಕಡಾ ಒಂದರಷ್ಟು ಹೆಚ್ಚುವರಿ ಕಂಡು ಬರುತ್ತದೆ" ಎಂದರು.

ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ವಿತ್ತ ಸಚಿವರು ಗ್ರಾಸ್ ಬಜೆಟರ ಸಪೋರ್ಟ್ (ಜಿಬಿಎಸ್) ಒಟ್ಟು ದೇಶೀಯ ಉತ್ಪಾದನೆಯ ಶೇಕಡಾ ಒಂದರ ಅರ್ಧದಷ್ಟು ಹೆಚ್ಚಳ ಕಾಣಲಿದೆ ಎಂಬ ಮುನ್ಸೂಚನೆ ನೀಡಿದ್ದರು. ಈ ಬಗ್ಗೆ ಗಮನ ಸೆಳೆದ ಮಾಂಟೆಕ್, "ಈ ವಿಚಾರದ ಬಗ್ಗೆ ಅವರು ಗಮನ ಹರಿಸಿದ್ದು ನನಗೆ ಸಂತಸ ತಂದಿದೆ" ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ