ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತಕ್ಕೆ ನಿಜ ಕಾರಣವೇನು ಬಯಲಾಗಿದೆ. ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿಯ ಈ ಒಂದು ನಿರ್ಧಾರ ಎನ್ನಲಾಗಿದೆ.
ಆರ್ ಸಿಬಿ ಜೂನ್ 3 ರಂದು ಕಪ್ ಗೆದ್ದಿತ್ತು. ಅದರ ಮರುದಿನವೇ ತರಾತುರಿಯಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಸಂಭ್ರಾಮಚರಣೆಗೆ ಆರ್ ಸಿಬಿ ತೀರ್ಮಾನಿಸಿತ್ತು. ಇಷ್ಟೊಂದು ತರಾತುರಿಯಲ್ಲಿ ಸಂಭ್ರಮಾಚರಣೆ ಮಾಡಿದ್ದೇಕೆ ಎಂದು ಹಲವರ ಪ್ರಶ್ನೆಯಾಗಿತ್ತು.
ಇದಕ್ಕೆ ವಿರಾಟ್ ಕೊಹ್ಲಿಯ ಲಂಡನ್ ಯಾತ್ರೆಯೇ ಕಾರಣ ಎನ್ನಲಾಗಿದೆ. ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಸಿಐಡಿ ತನಿಖೆ ನಡೆಸಿ ವರದಿ ತಯಾರಿಸಿದೆ.
ಈ ವರದಿಯಲ್ಲಿ ಹಲವು ಅಂಶಗಳು ಉಲ್ಲೇಖವಾಗಿದೆ. ಆರ್ ಸಿಬಿ ಇಷ್ಟು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ವಿರಾಟ್ ಕೊಹ್ಲಿ ಲಂಡನ್ ಗೆ ತೆರಳಲಿದ್ದಿದ್ದೇ ಕಾರಣ ಎಂದು ಉಲ್ಲೇಖಿಸಲಾಗಿದೆ.
ತಡವಾಗಿ ಕಾರ್ಯಕ್ರಮ ಮಾಡಿದರೆ ವಿರಾಟ್ ಕೊಹ್ಲಿ ಬರಲ್ಲ ಎಂಬ ಕಾರಣಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಆರ್ ಸಿಬಿ ಸಿಇಒ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಕೆಎಸ್ ಸಿಎ ಮೇಲೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.