ದ್ರಾವಿಡ್ ಸರ್ ಇನ್ನಾದ್ರೂ ನಮ್ಮ ಆರ್ ಸಿಬಿಗೆ ಬನ್ನಿ: ರಾಹುಲ್ ದ್ರಾವಿಡ್ ಗೆ ಸ್ಪೆಷಲ್ ಮನವಿ

Krishnaveni K

ಸೋಮವಾರ, 1 ಜುಲೈ 2024 (08:40 IST)
Photo Credit: Facebook
ಬೆಂಗಳೂರು: ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿಗರ್ಮಿಸಿರುವ ವಾಲ್ ರಾಹುಲ್ ದ್ರಾವಿಡ್ ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ವಿಶೇಷ ಬೇಡಿಕೆಯಿಟ್ಟಿದ್ದಾರೆ.

ಟೀಂ ಇಂಡಿಯಾದಲ್ಲಿ ಆಟಗಾರನಾಗಿ ದ್ರಾವಿಡ್ ಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕೋಚ್ ಆಗಿ ಟಿ20 ವಿಶ್ವಕಪ್ ಗೆದ್ದುಕೊಂಡು ನಿವೃತ್ತಿಯಾಗುತ್ತಿರುವುದು ವಿಶೇಷ. ಈ ಟಿ20 ವಿಶ್ವಕಪ್ ಗೆಲುವಿನಲ್ಲಿ ದ್ರಾವಿಡ್ ಕೊಡುಗೆ ಅಪಾರ. ಆದರೆ ಅವರೀಗ ಎರಡನೇ ಅವಧಿ ಮುಗಿಸಿ ಕೋಚ್ ಹುದ್ದೆಯಿಂದ ನಿರ್ಗಮಿಸಲು ತೀರ್ಮಾನಿಸಿದ್ದಾರೆ.

ದ್ರಾವಿಡ್ ರನ್ನು ಹಾಗಿದ್ದರೆ ಮುಂದೆ ಕ್ರಿಕೆಟ್ ಅಂಗಳದಲ್ಲಿ ನೋಡಲು ಸಾಧ್ಯವಿಲ್ಲವೇ ಎಂಬುದೇ ಅಭಿಮಾನಿಗಳ ಬೇಸರ. ಟೀಂ ಇಂಡಿಯಾದಲ್ಲಿ ಸಾಕಷ್ಟು ಯಶಸ್ಸು ಕಂಡುಕೊಂಡಿರುವ ಅವರು ಒಬ್ಬ ಐಡಿಯಲ್ ಕೋಚ್ ಎಂದು ಹೆಸರು ಪಡೆದಿದ್ದಾರೆ. ಒಂದು ತಂಡ ಕಟ್ಟುವಲ್ಲಿ ಅವರು ಅತ್ಯುತ್ತಮರು ಎನ್ನುವುದು ಸಾಬೀತಾಗಿದೆ.

ಹೀಗಾಗಿ ಈಗ ದ್ರಾವಿಡ್ ರನ್ನು ಸೆಳೆಯಲು ಐಪಿಎಲ್ ಫ್ರಾಂಚೈಸಿಗಳು ಪೈಪೋಟಿಗೆ ಬೀಳಲಿವೆ. ಫೈನಲ್ ಪಂದ್ಯ ಮುಗಿದ ಬಳಿಕ ದ್ರಾವಿಡ್ ತಮಾಷೆಯಾಗಿ ಮುಂದಿನ ವಾರದಿಂದ ನಾನು ನಿರುದ್ಯೋಗಿ ಎಂದಿದ್ದರು. ಈ ನಡುವೆ ಕನ್ನಡಿಗ ಅಭಿಮಾನಿಗಳು ದ್ರಾವಿಡ್ ಸರ್ ಇನ್ನಾದ್ರೂ ನಮ್ಮ ಆರ್ ಸಿಬಿಗೆ ಕೋಚ್ ಆಗಿ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಆರ್ ಸಿಬಿ ಇದುವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ದ್ರಾವಿಡ್ ರಂತಹ ಅನುಭವಿಯ ಮಾರ್ಗದರ್ಶನವಿದ್ದರೆ ತಂಡ ಗೆಲ್ಲಬಹುದು ಎಂಬುದು ಅಭಿಮಾನಿಗಳ ಆಸೆ. ಹೀಗಾಗಿ ದ್ರಾವಿಡ್ ರನ್ನು ಆರ್ ಸಿಬಿಗೆ ಆಹ್ವಾನಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ತಮ್ಮ ಭವಿಷ್ಯದ ಯೋಜನೆ ಏನು ಎಂಬುದನ್ನು ದ್ರಾವಿಡ್ ಹೇಳಿಕೊಂಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ