ಗುರು ದ್ರಾವಿಡ್ ಆದೇಶವನ್ನು ಧಿಕ್ಕರಿಸಿದ ಇಶಾನ್ ಕಿಶನ್ ಗೆ ತಂಡದಲ್ಲೂ ಸ್ಥಾನವಿಲ್ಲ

Krishnaveni K

ಸೋಮವಾರ, 22 ಜನವರಿ 2024 (08:30 IST)
ಮುಂಬೈ: ಟೀಂ ಇಂಡಿಯಾಗೆ ಮರಳಲು ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಬೇಕು ಎಂಬ ಕೋಚ್ ರಾಹುಲ್ ದ್ರಾವಿಡ್ ಆದೇಶವನ್ನು ಇಶಾನ್ ಕಿಶನ್ ಮತ್ತೆ ಧಿಕ್ಕರಿಸಿದ್ದಾರೆ.

ಜಾರ್ಖಂಡ್ ಪರ ಮತ್ತೆ ರಣಜಿ ಪಂದ್ಯಕ್ಕೆ ಇಶಾನ್ ಕಿಶನ್ ಗೈರಾಗಿದ್ದಾರೆ. ಕಳೆದ ದ.ಆಫ್ರಿಕಾ ಸರಣಿಗೆ ಮೊದಲು ಮಾನಸಿಕವಾಗಿ ಬಳಲಿರುವುದಾಗಿ ನೆಪ ಹೇಳಿ ಇಶಾನ್ ಹೊರಗುಳಿದಿದ್ದರು. ಬಳಿಕ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದಾದ ಬಳಿಕ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರ ಹಾಕಲಾಗಿತ್ತು. ಇದಾದ ಬಳಿಕ ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಲು ದ್ರಾವಿಡ್ ಸೂಚಿಸಿದ್ದರು. ಆದರೆ ಅದನ್ನು ಇಶಾನ್ ಧಿಕ್ಕರಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಕ್ಕೆ ಅವರನ್ನು ಕಡೆಗಣಿಸಲಾಯಿತು.

ಆದರೆ ಇದೀಗ ಮತ್ತೆ ಇಶಾನ್ ಕೋಚ್ ಆದೇಶಕ್ಕೆ ಕಿಮ್ಮತ್ತು ಕೊಡದೇ ರಣಜಿಯಿಂದ ಹೊರಗುಳಿದಿದ್ದರು. ಹೀಗಾಗಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯಕ್ಕೂ ಅವರನ್ನು ಪರಿಗಣಿಸಲಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲೂ ಇಶಾನ್ ಗೆ ಅವಕಾಶ ಸಿಗುವುದು ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ