ಲಂಡನ್: ಇಂಗ್ಲೆಂಡ್ ವನಿತೆಯರು ಶನಿವಾರ ಮಳೆಯಿಂದ ತೊಂದರೆಯಾದ ಎರಡನೇ ಏಕದಿನ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದ (ಡಿಎಲ್ಎಸ್) ಆಧಾರದಲ್ಲಿ ಎಂಟು ವಿಕೆಟ್ಗಳಿಂದ ಜಯಭೇರಿ ಬಾರಿಸಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು 1–1 ಸಮಬಲ ಸಾಧಿಸಿದಂತಾಗಿದೆ. ಸೌತಾಂಪ್ಟನ್ನಲ್ಲಿ ಬುಧವಾರ ನಡೆದ ಮೊದಲ ಪಂದ್ಯವನ್ನು ಭಾರತ ನಾಲ್ಕು ವಿಕೆಟ್ಗಳಿಂದ ಗೆದ್ದಿತ್ತು. ಇದೇ 22ರಂದು ನಡೆಯುವ ಕೊನೆಯ ಪಂದ್ಯ ನಿರ್ಣಾಯಕವಾಗಿದೆ.
ಲಾರ್ಡ್ಸ್ನಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿ ಆರಂಭವಾಯಿತು. ಪ್ರತಿ ಇನಿಂಗ್ಸ್ಗೆ 29 ಓವರ್ಗಳನ್ನು ನಿಗದಿ ಮಾಡಲಾಯಿತು. ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದಕ್ಕೂ ಮೊದಲು ಭಾರತದ ವನಿತೆಯರು ಟಿ20 ಸರಣಿಯಲ್ಲಿ 3–2ರಿಂದ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು.
ಉಪ ನಾಯಕಿ ಸ್ಮೃತಿ ಮಂದಾನ (42; 51ಎ, 4X5) ಮತ್ತು ದೀಪ್ತಿ ಶರ್ಮಾ (ಔಟಾಗದೇ 30; 34ಎ, 4X2) ಅವರಿಬ್ಬರ ಆಟದ ಬಲದಿಂದ ಭಾರತ ತಂಡವು ನಿಗದಿಯ ಓವರ್ಗಳಲ್ಲಿ 8 ವಿಕೆಟ್ಗಳಿಗೆ 143 ರನ್ ಪೇರಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡವು 18.4 ಓವರ್ಗಳಲ್ಲಿ ಒಂದು ವಿಕೆಟ್ಗೆ 102 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡಚಣೆ ಉಂಟುಮಾಡಿತು. ಹೀಗಾಗಿ, ಗೆಲುವಿನ ಗುರಿಯನ್ನು 115 ರನ್ಗೆ (24 ಓವರ್) ಪರಿಷ್ಕರಿಸಲಾಯಿತು. ಇನ್ನೂ 18 ಎಸೆತಗಳು ಬಾಕಿ ಇರುವಂತೆ ಇಂಗ್ಲೆಂಡ್ ಎರಡು ವಿಕೆಟ್ಗೆ 116 ರನ್ ಗಳಿಸಿ ಸರಣಿಯನ್ನು ಜೀವಂತವಾಗಿ ಉಳಿಸಿತು.