India-Australia T20I: ಟೀಂ ಇಂಡಿಯಾಗೆ ಅನುಭವಿಗಳು ಕೈಕೊಟ್ರು, ಕೈ ಹಿಡಿದ ಯುವ ಬ್ಯಾಟಿಗರು

ಶುಕ್ರವಾರ, 1 ಡಿಸೆಂಬರ್ 2023 (20:48 IST)
ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಎದುರಾಳಿಗೆ 175 ರನ್ ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಭಾರತಕ್ಕೆ ಇಂದು ಅನುಭವಿಗಳು ಕೈಕೊಟ್ಟರೆ, ಯುವ ಬ್ಯಾಟಿಗರು ಕೈ ಹಿಡಿದು ತಂಡಕ್ಕೆ ಗೌರವಯುತ ಮೊತ್ತ ಕೊಡಿಸಿದರು.

ಆರಂಭಿಕರಾದ ಯಶಸ್ವಿ ಜೈಸ್ವಾಲ್ 37, ಋತುರಾಜ್ ಗಾಯಕ್ ವಾಡ್ 32 ರನ್ ಗಳಿಸಿದರು. ಆದರೆ ಬಳಿಕ ಅನುಭವಿಗಳಾದ ಶ್ರೇಯಸ್ ಅಯ್ಯರ್ (8), ನಾಯಕ ಸೂರ್ಯಕುಮಾರ್ ಯಾದವ್ (1) ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ಇನ್ ಫಾರ್ಮ್ ಬ್ಯಾಟಿಗ ರಿಂಕು ಸಿಂಗ್ ಮತ್ತೆ ಹೊಡೆಬಡಿಯ ಆಟವಾಡಿದರು. ಕೇವಲ 29 ಎಸೆತಗಳಿಂದ 46 ರನ್ ಗಳಿಸಿದ ಅವರು ಕೊನೆಯ ಹಂತದಲ್ಲಿ ಔಟಾದರು. ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮ 35 ರನ್ ಗಳಿಸುವ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡರು.

ಆದರೆ ಅಕ್ಸರ್ ಪಟೇಲ್ ಮತ್ತು ದೀಪಕ್ ಚಹರ್ ತಲಾ ಸೊನ್ನೆ ಸುತ್ತಿದರು. ರವಿ ಬಿಷ್ಣೋಯ್ 4 ರನ್ ಗಳಿಸಿ ರನೌಟಾದರು. ಆಸ್ಟ್ರೇಲಿಯಾ ಪರ ಬೆನ್ ಡ್ವಾರ್ಶುಯಿಸ್ 3, ಜೇಸನ್ ಬೆಹ್ರಾಂಡ್ರಫ್, ತನ್ವೀರ್ ಸಂಗ ತಲಾ 2 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ