ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಆಪ್ತ ಸೇರಿ ಟೀಂ ಇಂಡಿಯಾದ ಪ್ರಮುಖ ಸಹಾಯಕ ಸಿಬ್ಬಂದಿಗಳನ್ನು ಬಿಸಿಸಿಐ ಕಿತ್ತೆಸೆದಿದೆ. ಆಸ್ಟ್ರೇಲಿಯಾ ಪ್ರವಾಸ ವೇಳೆ ತಂಡದ ವಿಚಾರಗಳನ್ನು ಲೀಕ್ ಮಾಡಿರುವುದಾಗಿ ವರದಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಪ್ರವಾಸದ ವೇಳೆ ಟೀಂ ಇಂಡಿಯಾದೊಳಗಿನ ವಿಚಾರಗಳು ಅನೇಕ ಬಾರಿ ಲೀಕ್ ಆಗಿದೆ. ಸರ್ಫರಾಜ್ ಖಾನ್ ಮೇಲೆ ಕೋಚ್ ಗಂಭೀರ್ ಸಿಟ್ಟಾಗಿದ್ದರು. ಹಿರಿಯ ಆಟಗಾರರೊಬ್ಬರು ತಂಡದ ನಾಯಕತ್ವ ವಹಿಸಿಕೊಳ್ಳಲು ರೆಡಿಯಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು.
ಈ ಸುದ್ದಿಗಳನ್ನು ಲೀಕ್ ಮಾಡಿರುವುದು ಟೀಂ ಇಂಡಿಯಾ ಸಿಬ್ಬಂದಿಗಳೇ ಎಂದು ಹೇಳಲಾಗಿತ್ತು. ಇದೀಗ ಘಟನೆ ನಡೆದು ಇಷ್ಟು ದಿನಗಳ ಬಳಿಕ ಬಿಸಿಸಿಐ ಸಹಾಯಕ ಸಿಬ್ಬಂದಿಗಳನ್ನು ಕಿತ್ತು ಹಾಕಿದೆ.
ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್, ಗಂಭೀರ್ ಆಪ್ತ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಮೆಂಟಲ್ ಸ್ಟ್ರೆಂಗ್ತ್ ಆಂಡ್ ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಹಾಗೂ ಇನ್ನೊಬ್ಬರು ಮಸಾಜರ್ ನನ್ನೂ ಕಿತ್ತು ಹಾಕಲಾಗಿದೆ.
ಟಿ ದಿಲೀಪ್ ರಾಹುಲ್ ದ್ರಾವಿಡ್ ಕಾಲದಿಂದಲೇ ತಂಡದ ಭಾಗವಾಗಿದ್ದರು. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಫೀಲ್ಡಿಂಗ್ ಮೆಡಲ್ ನೀಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟುಹಾಕಿದ್ದರು. ಇದೀಗ ಅವರನ್ನೂ ಕಿತ್ತು ಹಾಕಲಾಗಿದೆ. ಸದ್ಯದಲ್ಲೇ ತಂಡಕ್ಕೆ ಹೊಸ ಸಹಾಯಕ ಸಿಬ್ಬಂದಿಗಳ ನೇಮಕವಾಗಲಿದೆ.