ರಣಜಿ ಟ್ರೋಫಿ ಫೈನಲ್ ಬೆಂಗಳೂರಿನಲ್ಲಿ ಯಾಕಿಲ್ಲ: ಹುಬ್ಬಳ್ಳಿಯಲ್ಲಿ ಫೈನಲ್ ಯಾವಾಗ ಇಲ್ಲಿದೆ ಡೀಟೈಲ್ಸ್

Krishnaveni K

ಶನಿವಾರ, 21 ಫೆಬ್ರವರಿ 2026 (10:36 IST)
ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಗೆ ಕರ್ನಾಟಕ ಲಗ್ಗೆಯಿಟ್ಟಿದೆ. ಇದೀಗ ಜಮ್ಮು ಕಾಶ್ಮೀರ ತಂಡವನ್ನು ಎದುರಿಸಲಿದೆ. ಅಷ್ಟಕ್ಕೂ ರಣಜಿ ಟ್ರೋಫಿ ಫೈನಲ್ ಬೆಂಗಳೂರಿನಲ್ಲಿ ಬಿಟ್ಟು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದೇಕೆ? ಇಲ್ಲಿದೆ ಡೀಟೈಲ್ಸ್.

ಸದ್ಯದ ವರದಿಗಳ ಪ್ರಕಾರ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಇದೀಗ ನವೀಕರಣ ಕೆಲಸಗಳು ನಡೆಯುತ್ತಿದೆ. ಐಪಿಎಲ್ ಗೆ ಮುನ್ನ ಮಾರ್ಗಸೂಚಿಯ ಪ್ರಕಾರ ಗೇಟ್ ಅಗಲಗೊಳಿಸಲಾಗುತ್ತಿದೆ. ಉಳಿದಂತೆ ಪ್ರೇಕ್ಷಕರು ಸುರಕ್ಷಿತವಾಗಿ ಪಂದ್ಯ ವೀಕ್ಷಿಸಲು ಬೇಕಾದ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಚಿನ್ನಸ್ವಾಮಿ ಮೈದಾನ ಸದ್ಯಕ್ಕೆ ಲಭ್ಯವಿಲ್ಲ.

ಈ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಪಂದ್ಯ ನಡೆಯಲಿದೆ ಎನ್ನಲಾಗಿದೆ. ಆದರೆ ಬಿಸಿಸಿಐ ಇನ್ನೂ ಪಂದ್ಯ ನಡೆಯುವ ಸ್ಥಳ ಖಚಿತಪಡಿಸಿಲ್ಲ. ಫೆಬ್ರವರಿ 24 ರಿಂದ ಬೆಳಿಗ್ಗೆ 9.30 ಕ್ಕೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ.

ಫೈನಲ್ ಪಂದ್ಯವಾಡಲಿರುವ ಕರ್ನಾಟಕ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಸಿದ್ಧ ಕೃಷ್ಣ ಅವರನ್ನೊಳಗೊಂಡ ಘಟಾನುಘಟಿ ತಾರೆಯರೇ ತಂಡದಲ್ಲಿದ್ದಾರೆ. ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಸದ್ಯಕ್ಕಿರುವ ಫಾರ್ಮ್ ಗಮನಿಸಿದರೆ ಈ ಬಾರಿ ಕರ್ನಾಟಕವೇ ಗೆಲ್ಲುವ ಫೇವರಿಟ್ ತಂಡ ಎನಿಸುತ್ತಿದೆ. ಹೀಗಾಗಿ ಈ ಬಾರಿ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಕರ್ನಾಟಕ ಕುತೂಹಲದಿಂದ ಎದಿರು ನೋಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ