ವಿರಾಟ್ ಕೊಹ್ಲಿಯ ಭವಿಷ್ಯ ನಿಜವಾಯ್ತು, ಶತಕ ದಾಖಲಿಸಿದ ಯುವರಾಜ್ ಸಿಂಗ್

ಕೃಷ್ಣವೇಣಿ ಕೆ

ಗುರುವಾರ, 19 ಜನವರಿ 2017 (16:13 IST)
ಕಟಕ್: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ ಹಲವು ದಿನಗಳ ನಂತರ ಯುವರಾಜ್ ಸಿಂಗ್ ರನ್ನು ಆಯ್ಕೆ ಮಾಡಿದ್ದು ಯಾಕೆ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಅದಕ್ಕೆ ಅವರು ಇಂದು ಉತ್ತರ ನೀಡಿದ್ದಾರೆ.


ಧೋನಿ ಮೇಲೆ ಮಧ್ಯಮ ಕ್ರಮಾಂಕದಲ್ಲಿ ಒತ್ತಡ ಕಡಿಮೆ ಮಾಡಲು ಯುವಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅವರ ಭವಿಷ್ಯ ಇಂದು ನಿಜವಾಯ್ತು. ಭಾರತವನ್ನು ಸಂಕಷ್ಟದಿಂದ ಮೇಲೆತ್ತಲು ಇವರಿಬ್ಬರೇ ಬರಬೇಕಾಯಿತು.

ಇಂದು ಯುವಿ ಆಟದಲ್ಲಿ ಹಿಂದಿನ ಝಲಕ್ ಕಾಣಿಸಿತು. ಶತಕ ದಾಖಲಿಸಿದ ಮೇಲಂತೂ ನಿಂತಲ್ಲಿಯೇ ಬ್ಯಾಟ್ ಬೀಸಿ ಅವರು ಹೊಡೆದ ಕೆಲವು ಬೌಂಡರಿಗಳು ಹಳೆಯ ಯುವರಾಜ್ ರನ್ನು ನೆನಪಿಸಿದವು.  

ಇನ್ನು ಮುಂದೆ ಯುವಿ-ಧೋನಿ ಮ್ಯಾಜಿಕ್ ನೋಡಲಿದ್ದೀರಿ ಎಂದು ಅಂದು ಯುವರಾಜ್ ಹೇಳಿದ್ದನ್ನು ಇಂದು ಮಾಡಿ ತೋರಿಸಿದರು. ಆಟಕ್ಕೆ ಕುದುರಿಕೊಳ್ಳಲು ಇಬ್ಬರೂ ಸ್ವಲ್ಪ ಹೊತ್ತು ತೆಗೆದುಕೊಂಡರೂ, ಕುದುರಿದ ಮೇಲೆ ಹಲವು ವಾವ್ ಎನಿಸುವಂತಹ ಶಾಟ್ ಗಳು ಇವರ ಬ್ಯಾಟ್ ನಿಂದ ಹರಿದು ಬಂದವು. ಪರಸ್ಪರ ಮಾತಾಡಿಕೊಳ್ಳುತ್ತಾ, ಚುರುಕಾಗಿ ರನ್ ಗಳಿಸುತ್ತಾ ಭಾರತವನ್ನು ಸುರಕ್ಷಿತ ದಡಕ್ಕೆ ಕೊಂಡೊಯ್ದರು.

ತಮ್ಮ ಎಂದಿನ ಲೆಗ್ ಸೈಡ್ ಹೊಡೆತಗಳಿಂದ ಯುವಿ ಮನ ಸೆಳೆದರೆ, ಧೋನಿ ಹಿಂದಿನ ಅಬ್ಬರವಿಲ್ಲದಿದ್ದರೂ, ಮಧ್ಯಮ ಕ್ರಮಾಂಕಕ್ಕೆ ತಕ್ಕುದಾದ ಬ್ಯಾಟಿಂಗ್ ಮಾಡಿದರು. ಅಂತೂ ಯುವಿ ಏಕದಿನ ಪಂದ್ಯದ ನೇ ಶತಕ ದಾಖಲಿಸಿದರು. ಒಂದೆರಡು ಬಾರಿ ಅವರ ಕ್ಯಾಚ್ ಕೈ ಚೆಲ್ಲಿದ್ದೂ ಸೇರಿ ಅವರಿಗೆ ಅದೃಷ್ಟ ಸಾಥ್ ನೀಡಿತು.

ಅಂತಿಮವಾಗಿ ಶತಕ ದಾಖಲಿಸಿದಾಗ ಹಿಂದಿನಂತೆ ಹಾರಿ ಕುಣಿಯಲಿಲ್ಲ. ಅವರ ಮೊಗದಲ್ಲಿ ಇಷ್ಟು ದಿನ ಕಾದಿದ್ದ ಹತಾಶೆ, ತನ್ನನ್ನು ಟೀಕಿಸಿದವರಿಗೆ ತಕ್ಕ ಉತ್ತರ ಕೊಟ್ಟೆನೆಂಬ ಹೆಮ್ಮೆಯಿತ್ತು. ಬ್ಯಾಟ್ ನ್ನು ಎದೆಗೆ ಗುದ್ದಿಕೊಂಡು ವಿಶಿಷ್ಟವಾಗಿ ತಮ್ಮ ಶತಕದ ವೈಭವ ಆಚರಿಸಿಕೊಂಡರು. ಜತೆಗೆ ಕಣ್ಣೀರೂ ಸುರಿಯಿತು. ಪಕ್ಕದಲ್ಲಿದ್ದ ಧೋನಿ ಬಂದು ಸಮಾಧಾನಿಸಿದ್ದು ಮನಸ್ಸು ಕಲಕುವಂತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ