ಗಣೇಶನ ಕೂರಿಸುವವರು ಈ ತಪ್ಪು ಮಾಡಿದರೆ ಕಂಬಿ ಎಣಿಸುವುದು ಗ್ಯಾರಂಟಿ

Krishnaveni K

ಸೋಮವಾರ, 2 ಸೆಪ್ಟಂಬರ್ 2024 (08:57 IST)
ಬೆಂಗಳೂರು: ಇನ್ನೇನು ಗಣೇಶ ಹಬ್ಬ ಬರುತ್ತಿದ್ದು, ಈ ಬಾರಿ ಗಣೇಶನ ಮೂರ್ತಿಯನ್ನು ಗಲ್ಲಿ ಗಲ್ಲಿಯಲ್ಲಿ ಕೂರಿಸುವ ಮುನ್ನ ಸಾರ್ವಜನಿಕರು ಈ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ನಿಯಮ ಮೀರಿದರೆ ಈ ಬಾರಿ ಜೈಲೇ ಗ್ಯಾರಂಟಿಯಾಗಲಿದೆ.

`ಈ ಬಾರಿ ಗಣೇಶನ ಹಬ್ಬಕ್ಕೆ ಗಣೇಶನ ಕೂರಿಸಲು ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಿದೆ. ಅದನ್ನು ಮೀರಿದರೆ ನಿಮ್ಮ ಮೇಲೆ ಕೇಸ್ ದಾಖಲಾಗಲಿದೆ. ಹಾಗಿದ್ದರೆ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು ಸೇರಿಕೊಂಡು ಮಾಡಿರುವ ಹೊಸ ನಿಯಮಾವಳಿಗಳು ಏನು ಇಲ್ಲಿ ನೋಡಿ.

ಗಣೇಶನ ಮೂರ್ತಿಯನ್ನು ವಾಹನ ಸಾಗುವ ರಸ್ತೆ ಅಡ್ಡಗಟ್ಟಿ ಕೂರಿಸಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ತರುವಂತಿಲ್ಲ. ಮೊದಲನೆಯದಾಗಿ ಸಾರ್ವಜನಿಕವಾಗಿ ಗಣೇಶನ ಮೂರ್ತಿ ಇಡುವಾಗ ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿರಬೇಕು. ಅದರಲ್ಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ಕೂರಿಸುವಂತಿಲ್ಲ. ಈ ರೀತಿ ಮಾಡಿದರೆ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬೇಕಾಗಬಹುದು ಎಂದು ಬಿಬಿಎಂಪಿ ಹೇಳಿದೆ.

ಇನ್ನು ವಿವಾದಾತ್ಮಕ ಸ್ಥಳಗಳಲ್ಲಿ ಗಣೇಶನ ಕೂರಿಸುವುದು, ಗಣೇಶನ ಮೆರವಣಿಗೆ ನೆಪದಲ್ಲಿ ಬೇರೆಯವರಿಗೆ ತೊಂದರೆ ಮಾಡುವಂತಿಲ್ಲ. ಗಣೇಶನ ಕೂರಿಸ್ತೀವಿ ನೀವು ಚಂದಾ ನೀಡಲೇಬೇಕು ಎಂದು ಯಾರೂ ಬಲವಂತ ಮಾಡುವಂತಿಲ್ಲ. ಬಲವಂತವಾಗಿ ಹಣ ವಸೂಲಿ ಮಾಡಿದರೆ ಪೊಲೀಸರು ತಕ್ಕ ಕ್ರಮ ಕೈಗೊಳ್ಳಲಿದ್ದಾರೆ.

ಇನ್ನು ಗಣೇಶ ವಿಸರ್ಜನೆಯನ್ನು ಬಿಬಿಎಂಪಿ ಸೂಚಿಸಿದ ಸ್ಥಳಗಳಲ್ಲಿಯೇ ಮಾಡಬೇಕು. ವಿಸರ್ಜನೆ ಮಾಡುವ ವೇಳೆ ಮೆರವಣಿಗೆ ಮಾಡುವ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರೇ ಹೊಣೆಗಾರರು. ದೊಡ್ಡದಾಗಿ ಡಿಜೆ ಸೌಂಡ್, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವಂತಿಲ್ಲ. ಗಣೇಶನ ವಿಸರ್ಜನೆ ಮಾಡುವುದಿದ್ದರೆ ರಾತ್ರಿ 10 ಗಂಟೆಯೊಳಗೆ ಮಾಡಿ ಮುಗಿಸಬೇಕು. ಇವಿಷ್ಟು ನಿಯಮಾವಳಿಯನ್ನು ಉಲ್ಲಂಘಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ