ಸಂಭ್ರಮ, ಸಡಗರದ ಗಣೇಶನ ಹಬ್ಬ

ಗುಣವರ್ಧನ ಶೆಟ್ಟಿ
WD
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು. ಸಾಂಪ್ರದಾಯಿಕ ರೀತಿಯಲ್ಲಿ ಕುಟುಂಬದ ಆಚರಣೆಯಾಗಿದ್ದ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು.

ಲೋಕಮಾನ್ಯ ತಿಲಕರು ಗಣೇಶ ಮ‌ೂರ್ತಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದರು. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮ‌ೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ತಿಲಕರು ಮಾರ್ಪಡಿಸಿದರು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ.

ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಳನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು. ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು.
WD


ಗಣೇಶನ ಪೂಜೆ
ಗಣೇಶ ಚತುರ್ಥಿಯಂದು ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ ಮನೆಗಳಲ್ಲಿ ತಾತ್ಕಾಲಿಕ ಮಂಟಪಗಳಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶ ಚತುರ್ಥಿ ಆರಂಭವಾಗುತ್ತದೆ. ಗಣೇಶನ ಸಾರ್ವಜನಿಕ ಉತ್ಸವಕ್ಕೆ ದೇಣಿಗೆ ಮ‌ೂಲಕ ಹಣ ಸಂಗ್ರಹಿಸಿ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತದೆ. ಮಂಟಪಗಳು ಹೂವಿನ ಹಾರ, ಝಗಮಗಿಸುವ ದೀಪಗಳಿಂದ ಅಲಂಕೃತಗೊಳ್ಳುತ್ತವೆ. ಕೆಂಪು ರೇಷ್ಮೆ ದೋತಿ ಮತ್ತು ಶಾಲನ್ನು ಹೊದ್ದ ಅರ್ಚಕ ಮಂತ್ರಗಳ ಪಠಣದೊಂದಿಗೆ ನಿರ್ಜೀವ ಮ‌ೂರ್ತಿಗೆ ಜೀವ ತುಂಬುತ್ತಾರೆ.

ಈ ಆಚರಣೆಗೆ ಪ್ರಾಣಪ್ರತಿಷ್ಠ ಎನ್ನುತ್ತಾರೆ. ಇದಾದ ಬಳಿಕ ಶೋಡಶೋಪಚಾರ(16 ವಿಧಗಳ ಅರ್ಪಣೆ) ಆಚರಣೆ ಆರಂಭವಾಗುತ್ತದೆ. ತೆಂಗಿನಕಾಯಿ, ಬೆಲ್ಲ, 21 ಮೋದಕಗಳು, 21 ದುರ್ವ ಹುಲ್ಲು ಮತ್ತು ಕೆಂಪು ಹೂವುಗಳನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ಸಮಾರಂಭವುದ್ದಕ್ಕೂ ಋಗ್‌ವೇದ, ಗಣಪತಿ ಅಥರ್ವಾ ಶಿರ್ಶಾ ಉಪನಿಷದ್ ಮತ್ತು ನಾರದ ಪುರಾಣದ ಗಣೇಶ ಸ್ತೋತ್ರದಿಂದ ಆಯ್ದ ವೇದಮಂತ್ರಗಳನ್ನು ಪಠಣಮಾಡಲಾಗುತ್ತದೆ. 10 ದಿನಗಳವರೆಗೆ ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿವರೆಗೆ ಗಣೇಶನ ಪೂಜೆ ನೆರವೇರಿಸಲಾಗುತ್ತದೆ.

11ನೇ ದಿನ ವಿಗ್ರಹವನ್ನು ಮೆರವಣಿಗೆ ಮ‌ೂಲಕ ನೃತ್ಯ, ಹಾಡು ಮತ್ತಿತರ ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಗಣೇಶವಿಸರ್ಜನೆಯು ಗಣೇಶನ ನೆಲೆವೀಡಾದ ಕೈಲಾಸದ ಪ್ರಯಾಣದಲ್ಲಿ ಭಕ್ತಜನಕೋಟಿಯ ದುರಾದೃಷ್ಟಗಳನ್ನು ತನ್ನ ಜತೆ ಒಯ್ಯುವುದರ ಸಂಕೇತವಾಗಿದೆ. ಗಣೇಶನಿಗೆ ಅರ್ಪಿಸುವ ಸಿಹಿತಿಂಡಿ ಮೋದಕ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿ, ಒಣತೆಂಗು, ಬೆಲ್ಲ, ಒಣಹಣ್ಣುಗಳು ಮತ್ತಿತರ ಪದಾರ್ಥಗಳನ್ನು ಬೆರೆಸಿ ಉಗಿಯಿಂದ ಬೇಯಿಸಲಾಗುತ್ತದೆ ಅಥವಾ ಕರಿಯಲಾಗುತ್ತದೆ. ಇನ್ನೊಂದು ಜನಪ್ರಿಯ ತಿಂಡಿ ಕರಂಜಿ ಅಥವಾ ಕನ್ನಡದಲ್ಲಿ ಕರ್ಜಿಕಾಯಿ ಎನ್ನಲಾಗುವ ಇದು ರುಚಿಯಲ್ಲಿ ಮೋದಕದಂತೆಯೇ ಇರುತ್ತದೆ.

ಇಂದು ಗಣೇಶ ಹಬ್ಬವು ಜನಪ್ರಿಯ ಉತ್ಸವವಲ್ಲದೇ ಮಹಾರಾಷ್ಟ್ರದಲ್ಲಿ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಅನೇಕ ಕಲಾವಿದರು, ಉದ್ಯಮಗಳು ಈ ಬೃಹತ್ ಉತ್ಸವದ ಮೇಲೆ ಅವಲಂಬಿತವಾಗಿದೆ. ಉದಯೋನ್ಮುಖ ಕಲಾವಿದರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ಈ ಉತ್ಸವವು ವೇದಿಕೆಯಾಗಿದೆ.