ಆರೋಗ್ಯವಾಗಿರಲು ನೀರು ಕುಡಿಯಿರಿ

ನೀರಿನ ಬಗ್ಗೆ ನಿರ್ಲಕ್ಷ್ಯವಹಿಸುವುದು ಹಾಗೂ ಅದನ್ನು ಪೋಲುಮಾಡುವುದು ನಮ್ಮಲ್ಲಿ ಸಾಮಾನ್ಯ ದೃಶ್ಯ. ಆದರೆ ಮಾನವನ ದೇಹಕ್ಕೆ ಪ್ರಮುಖವಾಗಿ ಬೇಕಿರುವ ಜೀವಾಂಶ ನೀರು ಎಂಬುದನ್ನು ನಾವು ಮರೆತಿರುತ್ತೇವೆ.

ನೀರು ದೇಹದ ಬಾಹ್ಯ ಅಂಗಗಳನ್ನು ಸ್ವಚ್ಛವಾಗಿಡುವುದರೊಂದಿಗೆ ಒಳಗಿನ ಅಂಗಗಳನ್ನು ಪುನಃಶ್ಚೇತನಗೊಳಿಸುತ್ತದೆ. ದೇಹದೊಳಗಿನ ಕಶ್ಮಲಗಳನ್ನು ಹೊರಹಾಕಲು ದೇಹದಲ್ಲಿರುವ ಪ್ರಮುಖ ಮಾಧ್ಯಮ ನೀರು. ನೀರಿನೊಂದಿಗೆ ಸೋಸಿ ಕಶ್ಮಲಗಳನ್ನು ದೇಹ ಹೊರ ವಿಸರ್ಜಿಸುತ್ತದೆ.

ನೀರಿನ ಕೊರತೆಯಿಂದ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು. ವಾಂತಿ ಬೇಧಿಯಿಂದಾಗಿ ಸಂಭವಿಸುವ ಮರಣಗಳು ನೀರು ಹಾಗೂ ಲವಣಾಂಶಗಳ ಕೊರತೆಯಿಂದ ಸಂಭವಿಸುತ್ತವೆ. ದೇಹದೊಳಗೆ ನೀರಿನ ಸಮತೋಲನ ಸರಿಯಾಗಿರದಿದ್ದರೆ ವ್ಯಕ್ತಿ ಪ್ರಜ್ಞೆಯಿಂದಿರಲು ಸಾಧ್ಯವಿಲ್ಲ. ನೀರು ಜೀವಕೋಶಗಳನ್ನು ಚುರುಕುಗೊಳಿಸುವುದು.

ನೀರಿನ ಇನ್ನೊಂದು ಅಂಶವೆಂದರೆ ಮೂತ್ರಜನಾಂಗಗಳ ಮೂಲಕ ಆಹಾರದಲ್ಲಿ ಕಶ್ಮಲಗಳನ್ನು ಹೊರಹಾಕುವುದು. ನೀರಿನ ಮೂಲಕ ಮೂತ್ರ ಪಿಂಡಗಳಲ್ಲಿ ಕಶ್ಮಲಗಳು ಸೋಸಿ ಮೂತ್ರದ ರೂಪದಲ್ಲಿ ಹೊರ ಹಾಕಲಾಗುತ್ತದೆ. ಇದೇ ರೀತಿ ಚರ್ಮದಲ್ಲೂ ನೀರು ಹವಾ ನಿಯಂತ್ರಕದಂತೆ ಬಳಕೆಯಾಗುತ್ತದೆ. ಬೆವರಿನ ರೂಪದಲ್ಲಿ ದೇಹದ ಉಷ್ಣತೆಯನ್ನು ಸರಿದೂಗಿಸತ್ತದೆ, ಚರ್ಮದಲ್ಲಿ ಕಶ್ಮಲಗಳನ್ನು ಬೆವರಿನ ರೂಪದಲ್ಲೇ ಹೊರ ಹಾಕಲಾಗುತ್ತದೆ.

ಈ ಎಲ್ಲಾ ಉದ್ದೇಶಗಳಿಗಾಗಿ ಹಾಗೂ ರಕ್ತ ಪರಿಚಲನೆಗಾಗಿ ದೇಹಕ್ಕೆ ಪ್ರತಿದಿನ ಕನಿಷ್ಠ ಮೂರು ಲೀಟರ್‌ಗಳಷ್ಟು ನೀರು ಅಗತ್ಯವಿದೆ. ಇಷ್ಟು ಪ್ರಮಾಣದಲ್ಲಿ ನೀರು ಲಭಿಸದಿದ್ದರೆ ಮೂತ್ರಾಂಗಗಳ ದೋಷ ಸಂಭವಿಸುತ್ತದೆ. ಇಂತಹ ಪ್ರಮುಖ ಕಾರಣಗಳಿಂದಾಗಿ ನೀರು ಮನುಷ್ಯನ ಅಸ್ತಿತ್ವಕ್ಕೆ ಅಗತ್ಯವಿರುವ ನಿಸರ್ಗದತ್ತ ಸಾಮಗ್ರಿಯಾಗಿದೆ.

ವೆಬ್ದುನಿಯಾವನ್ನು ಓದಿ