ಮನೆ ಮುಂದೆ ಯುವಕನ ಜತೆ ಮಾತನಾಡುತ್ತಿದ್ದಕ್ಕೆ ಮಗಳ ಹತ್ಯೆ

ಗುರುವಾರ, 2 ಜೂನ್ 2016 (10:28 IST)
ತಮ್ಮ ಮನೆ ಮುಂದೆ ನಿಂತು ಯುವಕನ ಜತೆ ಮಾತನಾಡಿದಳೆಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆಗೈದ ದಾರುಣ ಘಟನೆ ಗೋವಾದಲ್ಲಿ ನಡೆದಿದೆ. ಇದೊಂದು ಮರ್ಯಾದಾ ಹತ್ಯೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 

ಆರೋಪಿಯನ್ನು ತಮಿಳುನಾಡು ಮೂಲದ ಶಂಕರ್ ರೆಡ್ಡಿ(52) ಎಂದು ಗುರುತಿಸಲಾಗಿದ್ದು ಆತ ಗೋವಾದಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ತನ್ನ ಹೆಣ್ಣು ಮಕ್ಕಲಿಬ್ಬರು ಮನೆ ಹೊರ ಭಾಗದಲ್ಲಿ ಯುವಕನೊಬ್ಬನ ಜತೆ ಮಾತನಾಡುತ್ತಿದ್ದುದನ್ನು ಆತ ಕಂಡಿದ್ದಾನೆ. ಅಷ್ಟಕ್ಕೆ ಕೆಂಡಾಮಂಡಲನಾದ ಆತ ಅವರಿಬ್ಬರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾನೆ. 
 
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿರಿಯ ಮಗಳು ಸುಜಾತಾ(20) ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಕಿರಿಯ ಮಗಳಿಗೆ ಗಂಭೀರ ಗಾಯಗಳಾಗಿದ್ದು ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ