ದೆಹಲಿ ಹೈಕೋರ್ಟ್ ಮುಂದೆ ಮಂಡಿಯೂರಿದ ವಾಟ್ಸಪ್

ಶುಕ್ರವಾರ, 9 ಜುಲೈ 2021 (18:05 IST)
ದೆಹಲಿ: ವಾಟ್ಸಪ್ ಗೋಪ್ಯತಾ ನೀತಿಯನ್ನು ತಡೆ ಹಿಡಿಯುವುದಾಗಿ ದೆಹಲಿ ಹೈಕೋರ್ಟ್ಗೆ ವಾಟ್ಸಪ್ ಶುಕ್ರವಾರ  ತಿಳಿಸಿದೆ. ವಾಟ್ಸಪ್ ತಂದಿರುವ ಈ ಗೋಪ್ಯತಾ ನೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.




















 ಈ ಮೊದಲು ಇದೇ ನೀತಿಯನ್ನು ತರಲು ಹೊರಟು ಸಾಕಷ್ಟು ವಿರೋಧಗಳನ್ನು ಎದುರಿಸಿದ ನಂತರ ವಾಪಸ್ ಪಡೆದುಕೊಂಡಿತ್ತು. ಮತ್ತೆ ಈ ನೀತಿಯನ್ನು ತರಲು ಹೊರಟ ವಾಟ್ಸಪ್ ತಾತ್ಕಾಲಿಕವಾಗಿ ಹಿಂದೆ ಸರಿದಿದೆ.
 ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ವೈಯಕ್ತಿಕ ಮಾಹಿತಿ ರಕ್ಷಣಾ ಮೂಸೂದೆ - 2019 ಜಾರಿಗೆ ಬರುವವರೆಗೆ ವಿವಾದಕ್ಕೆ ಕಾರಣವಾಗಿರು ಈ ನೀತಿಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದೆ.ಈ ಕುರಿತು ವಾಟ್ಸಪ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ಜ್ಯೋತಿ ಸಿಂಗ್ ಅವರುಗಳು ಇದ್ದ ಪೀಠದ ಎದುರು ಶುಕ್ರವಾರ ಮಾಹಿತಿ ನೀಡಿದ್ದಾರೆ.
“ಸರ್ಕಾರವು ನಮಗೆ ಗೋಪ್ಯತಾ ನೀತಿಯನ್ನು ರದ್ದುಪಡಿಸಲು ಕೇಳಿತು. ಆದರೆ, ನಾವು ಮಾಹಿತಿ ರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ ನೀತಿಯನ್ನು ಜಾರಿಗೊಳಿಸುವುದಿಲ್ಲವೆಂದು ತಿಳಿಸಿದ್ದೇವೆ. ಮಸೂದೆ ಯಾವಾಗ ಜಾರಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. ಕೆಲ ಸಮಯದವರೆಗೆ ನಾವು ಇದನ್ನು ಜಾರಿಮಾಡುವುದಿಲ್ಲ ಎಂದು ಹೇಳಿದ್ದೇವೆ. ಒಂದು ವೇಳೆ ಮಸೂದೆಯು ನೀತಿಯನ್ನು ಜಾರಿಗೊಳಿಸಲು ನಮಗೆ ಅನುವು ಮಾಡಿದರೆ, ಆಗ ಸಂಪೂರ್ಣ ಬೇರೆಯದೇ ಆದ ಪರಿಣಾಮಗಳು ಉಂಟಾಗಲಿವೆ,” ಎಂದು ಸಾಳ್ವೆ ಹೇಳಿದರು.
ವಾಟ್ಸಪ್ ಗೋಪ್ಯತಾ ನೀತಿಯು ಮಾಹಿತಿ ತಂತ್ರಜ್ಞಾನ ನಿಯಮಗಳು - 2011ರ ಉಲ್ಲಂಘನೆಯಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಪ್ಗೆ ನೋಟಿಸ್ ನೀಡಿತ್ತು. ಅದಕ್ಕೆ ನಾವು ಪ್ರತಿಕ್ರಿಯಿಸಿದ್ದು, ಕೆಲಕಾಲದವರೆಗೆ ವಾಟ್ಸಾಪ್ನ ಕಾರ್ಯಾನುಗುಣವನ್ನು ಸೀಮಿತಗೊಳಿಸದಿರಲು ತೀರ್ಮಾನಿಸಿದ್ದು ಬಳಕೆದಾರರಿಗೆ ಅಪ್ಡೇಟೆಡ್ ಆವೃತ್ತಿಯನ್ನು ತೋರಿಸುವುದಾಗಿ ಹೇಳಿದ್ದೇವೆ. ನಾವು ಈ ವಿಧಾನವನ್ನು ಮಾಹಿತಿ ರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ ಮುಂದುವರೆಸಲಿದ್ದೇವೆ. ಸ್ವಯಂ ಪ್ರೇರಿತವಾಗಿ ಅಲ್ಲಿಯವರೆಗೆ ಅಪ್ಡೇಟ್ಅನ್ನು ತಡೆಹಿಡಿಯಲು ತೀರ್ಮಾನಿಸಿದ್ದೇವೆ,” ಎಂದು ವಿವರಿಸಿದರು.
ವಿಚಾರಣೆಯ ವೇಳೆ ನ್ಯಾಯಾಲಯವು, ವಾಟ್ಸಾಪ್ ಯೂರೋಪ್ ಹಾಗೂ ಭಾರತಕ್ಕೆ ಪ್ರತ್ಯೇಕವಾಗಿರುವ ನೀತಿಗಳನ್ನು ಹೊಂದಿದೆಯೇ ಎಂದು ನ್ಯಾಯಾಲಯ ಕೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಾಳ್ವೆ, “ಸಂಸತ್ತಿನ ಕಾಯಿದೆ ಬರುವವರೆಗೆ ನಾವು ಏನನ್ನೂ ಮಾಡಲು ಮುಂದಾಗುವುದಿಲ್ಲ. ಇದು ನಮ್ಮ ವಚನವಾಗಿದೆ. ಸಂಸತ್ತು ಒಂದೊಮ್ಮೆ ಭಾರತಕ್ಕೆ ಪ್ರತ್ಯೇಕ ನೀತಿಯನ್ನು ಹೊಂದಲು ನಮಗೆ ಅನುವು ಮಾಡಿದರೆ ನಾವು ಹೊಂದುತ್ತೇನೆ. ಇಲ್ಲವಾದರೆ, ನಂತರ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ,” ಎಂದರು.
ವಾಟ್ಸಪ್ನ ಈ ನೀತಿಯನ್ನು ಬಳಕೆದಾರರು ಒಪ್ಪಿಕೊಂಡರೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅವರು ಸುಲಭವಾಗಿ ಪಡೆಯಬಹುದು ಹಾಗೂ ಆ ಮಾಹಿತಿಯನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳಬಹುದು ಎನ್ನುವ ಅಪಾಯಕಾರಿ ಅಂಶಗಳಿವೆ ಎಂದು ಮಾಹಿತಿ ತಂತ್ರಜ್ಞಾನ ಪರಿಣಿತರು ಆತಂಕ ವ್ಯಕ್ತಪಡಿಸಿದ್ದರಿಂದ ಇದರ ವಿರುದ್ದ ಸಾಕಷ್ಟು ಕೂಗು ಎದ್ದಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ