IPL 2025: ಆರ್‌ಸಿಬಿ ಬೌಲರ್‌ಗಳ ಬೆಂಕಿ ದಾಳಿಗೆ ತತ್ತರಿಸಿದ ಕಿಂಗ್ಸ್‌ ಬ್ಯಾಟರ್ಸ್‌: ಬೆಂಗಳೂರು ತಂಡ ಫೈನಲ್‌ಗೇರುವುದು ಪಕ್ಕಾ

Sampriya

ಗುರುವಾರ, 29 ಮೇ 2025 (21:11 IST)
Photo Courtesy X
ಚಂಡೀಗಢ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬೌಲರ್‌ಗಳ ಬೆಂಕಿ ದಾಳಿಗೆ ಪಂಜಾಬ್‌ ಕಿಂಗ್ಸ್‌ ತಂಡವು ಅಕ್ಷರಶಃ ತತ್ತರಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ತಂಡವನ್ನು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡದ ಬೆಂಗಳೂರು ಬೌಲರ್‌ಗಳು ಪಾರಮ್ಯ ಮೆರೆದರು. 

ಇಲ್ಲಿನ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್  ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್‌ ಆಯ್ದುಕೊಂಡಿತ್ತು.

ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ತಂಡಕ್ಕೆ ವಾಪಸಾಗುತ್ತಿದ್ದಂತೆ ತಂಡದ ಬೌಲಿಂಗ್‌ ಮಾರಕವಾಗಿದ್ದು ಪಂಜಾಬ್ ಕಿಂಗ್ಸ್ ಅಕ್ಷರಶಃ ಕಂಗಾಲಾಗಿದೆ. 14.1 ಓವರ್ ಗಳಲ್ಲಿ 101 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದ್ದು, ಆರ್‌ಸಿಬಿ ಗೆಲುವಿಗೆ ಸುಲಭ ಗುರಿ ನೀಡಿದೆ. ಹೀಗಾಗಿ, ಈ ಸವಾಲನ್ನು ಮೆಟ್ಟಿನಿಂತು ಬೆಂಗಳೂರು ತಂಡ ಫೈನಲ್‌ಗೇರುವುದು ಪಕ್ಕಾ ಆದಂತಿದೆ.

ಮೊದಲು ಬ್ಯಾಟಿಂಗ್‌ಗೆ ಬಂದ ಪಂಜಾಬ್‌ ಕಿಂಗ್ಸ್‌ಗೆ ಯಶ್ ದಯಾಳ್ ಮೊದಲ ಆಘಾತ ನೀಡಿದರು. ಯಶ್ ದಯಾಳ್ ತಮ್ಮ ಮೊದಲ ಓವರ್ ನಲ್ಲೇ ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪಡೆಯುವ ಮೂಲಕ ಪಂಜಾಬ್‌ಗೆ ಮೊದಲ ಆಘಾತ ನೀಡಿದರು. ನಂತರದಲ್ಲಿ ಭುವನೇಶ್ವರ್ ಕುಮಾರ್ ಪ್ರಭ್‌ಸಿಮ್ರನ್ ಅವರ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು. ಜೋಶ್ ಹೇಜಲ್‌ವುಡ್ ಜೋಶ್ ಇಂಗ್ಲಿಸ್ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದು ಮಾರಣಾಂತಿಕ ಆಘಾತ ನೀಡಿದರು.

ಬಳಿಕ ಸ್ಪಿನ್ನರ್‌ ಸುಯಾಶ್ ಶರ್ಮಾ ಕೈಚಳಕ ಮೆರೆದರು. ತಮ್ಮ ಮೊದಲ ಓವರ್ ನಲ್ಲೇ 2 ವಿಕೆಟ್ ಪಡೆದು ಮಿಂಚಿದರು. ಬಳಿಕ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್ ಪಡೆದು ಪಂಜಾಬ್‌ಗೆ ಕೊನೆ ಮೊಳೆ ಹೊಡೆದರು. ಬಳಿಕ ರೊಮಾರಿಯೋ ಶೆಫರ್ಡ್ ಕೂಡ ಒಂದು ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ ಕೊನೆಯ ವಿಕೆಟ್ ಪಡೆದು ಪಂಜಾಬ್‌ ಕಿಂಗ್ಸ್‌ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು.

ಹೇಜಲ್‌ವುಡ್ ಮತ್ತು ಸುಯಾಶ್ ಶರ್ಮಾ ತಲಾ ಮೂರು ವಿಕೆಟ್ ಪಡೆದರು. ಯಶ್ ದಯಾಳ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದು ಮಿಂಚಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ