ಕನಸು ಕನಸಾಗೇ ಉಳಿಯಿತು : ಆಶಿಕಾ

ಗುರುವಾರ, 11 ನವೆಂಬರ್ 2021 (14:30 IST)
ನಟ ಪುನೀತ್ ರಾಜ್ಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಆಘಾತವನ್ನು ನೀಡಿದ್ದು, ಅವರೊಡನೆ ತೆರೆ ಹಂಚಿಕೊಳ್ಳುವ, ಕೆಲಸ ಮಾಡುವ ಕನಸನ್ನು ಹೊತ್ತಿದ್ದ ಕಲಾವಿದರ ಕನಸುಗಳು ಹಾಗೇ ಉಳಿದಿವೆ.
ಪ್ರಸ್ತುತ ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಆಶಿಕಾ ರಂಗನಾಥ್ ಕೂಡ ಇದಕ್ಕೆ ಹೊರತಾಗಿಲ್ಲ. ಪುನೀತ್ ಅವರೊಂದಿಗೆ ‘ದ್ವಿತ್ವ’ ಚಿತ್ರದಲ್ಲಿ ತೆರೆಹಂಚಿಕೊಳ್ಳುವ ಸಿದ್ಧತೆಯಲ್ಲಿ ಅವರಿದ್ದರು. ಆದರೆ ಅನಿರೀಕ್ಷಿತ ಘಟನೆ ಈ ಎಲ್ಲಾ ನಿರೀಕ್ಷೆಗಳನ್ನೂ ಪುಡಿಪುಡಿ ಮಾಡಿದೆ. ಪುನೀತ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ‘‘ಪುನೀತ್ ಸರ್ ಜೊತೆ ಸ್ಕ್ರೀನ್ ಶೇರ್ ಮಾಡೋ ಅವಕಾಶ ಸಿಕ್ಕಿತ್ತು. ದ್ವಿತ್ವ ಸಿನಿಮಾದಲ್ಲಿ ನಟಿಸೋಕೆ ಎಲ್ಲಾ ಸಿದ್ದತೆ ನಡೀತಿತ್ತು. ಆದರೆ ಪುನೀತ್ ಸರ್ ಜೊತ ನಟಿಸೊ ಆಸೆ ಕನಸು ಕನಸಾಗೇ ಉಳಿಯಿತು’’ ಎಂದು ಅವರು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಅವರೊಂದಿಗಿನ ಇತರ ಸುಂದರ ಕ್ಷಣಗಳನ್ನೂ ಅವರು ಮೆಲುಕು ಹಾಕಿದ್ದಾರೆ. ‘‘ಪುನೀತ್ ಅವರ ನೃತ್ಯ ಬಹಳ ಇಷ್ಟ. ಅವರೂ ನನ್ನ ನೃತ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು’’ ಎಂದು ಆಶಿಕಾ ನುಡಿದಿದ್ದಾರೆ. ‘ಮದಗಜ’ ಚಿತ್ರದ ಸುದ್ದಿಗೋಷ್ಠಿಯ ನಂತರ ಆಶಿಕಾ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ