ಅಪ್ಪು ಅಭಿಮಾನಿಗಳ ಅಭಿಮಾನಕ್ಕೆ ಸಾಟಿ ಏನು?!

ಗುರುವಾರ, 11 ನವೆಂಬರ್ 2021 (11:16 IST)
ಬಾಗಲಕೋಟೆ : ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಕಡಿಮೆಯಾಗುತ್ತಿಲ್ಲ.
ಅಪ್ಪು ಸಮಾಧಿ ದರ್ಶನ ಮಾಡಲು ಕಂಠೀರವ ಸ್ಟೇಡಿಯಂಗೆ ಪ್ರತಿದಿನ ಜನ ಸಾಗರವೇ ಹರಿದು ಬರುತ್ತಿದೆ. ಸಮಾಧಿ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ನಡುವೆ ಯುವರತ್ನನ ಅಭಿಮಾನಿಯೊಬ್ಬರು ಸಮಾಧಿ ಭೇಟಿಗೆ ಸೈಕಲ್ ಯಾತ್ರೆ ಮೂಲಕ ಬಾಗಲಕೋಟೆಯಿಂದ ಬರುತ್ತಿದ್ದಾರೆ.
ನಿನ್ನೆ (ನ.10) ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಅಭಿಮಾನಿ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ. ರಾಘವೇಂದ್ರ ಗಾಣಿಗೇರ ಎಂಬ ಅಭಿಮಾನಿ ಸೈಕಲ್ ಯಾತ್ರೆ ಹೊರಟಿದ್ದು, ನಿನ್ನೆ ರಾತ್ರಿ ಹುನಗುಂದ ತಲುಪಿ, ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಿಗ್ಗೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಶುರುವಾಗಿದೆ. ಹುನಗುಂದ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳಿಂದ ಸೈಕಲ್ ಯಾತ್ರೆ ಹೊರಟ ಅಭಿಮಾನಿಗೆ ಸನ್ಮಾನ ಮಾಡಿದ್ದಾರೆ.
ಬಾದರದಿನ್ನಿ ಗ್ರಾಮದಿಂದ ಸುಮಾರು 600 ಕಿಲೋಮೀಟರ್ ಸೈಕಲ್ ಯಾತ್ರೆಯಲ್ಲಿ ಬೆಂಗಳೂರು ತಲುಪಲಿದ್ದಾರೆ. ಕನ್ನಡ ಧ್ವಜ ಸೈಕಲ್ಗೆ ಸಿಕ್ಕಿಸಿ, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಅಭಿಮಾನಿ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ. ರಾಘವೇಂದ್ರ ಗಾಣಿಗೇರ ಪುನೀತ್ ಮೃತಪಟ್ಟ ದಿನವೇ ಹೋಗಬೇಕು ಅಂತ ಅಂದುಕೊಂಡಿದ್ದರಂತೆ. ಆದರೆ ಅನಾರೋಗ್ಯ ಕಾರಣದಿಂದ ಈಗ ಸೈಕಲ್ ಯಾತ್ರೆ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ. ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ