ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಆದರೆ ಬೆನ್ನು ನೋವಿನ ನೆಪವೊಡ್ಡಿ ಬರಲಾಗುವುದಿಲ್ಲ ಎಂದ ದರ್ಶನ್ ಗೆ ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.
ಜಾಮೀನಿನ ಮೇಲೆ ಹೊರಗಿರುವ ಎಲ್ಲಾ 17 ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಆದರೆ ನಟ ದರ್ಶನ್ ನನಗೆ ಬೆನ್ನು ನೋವಿದೆ ಕೋರ್ಟ್ ಗೆ ಬರಲು ಆಗುವುದಿಲ್ಲ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ಕೇಳಿದ್ದರು.
ಆದರೆ ಇಂದು ನಟ ದರ್ಶನ್ ಗೈರಾಗಿರುವುದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಆರೋಪಿಗಳೂ ನಿಗದಿತ ದಿನಕ್ಕೆ ಕೋರ್ಟ್ ಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ನ್ಯಾಯಾಧೀಶರು ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮೊನ್ನೆಯಷ್ಟೇ ನಟ ದರ್ಶನ್ ರಾಜಸ್ಥಾನ್ ನಿಂದ ಡೆವಿಲ್ ಶೂಟಿಂಗ್ ಮುಗಿಸಿ ಬಂದಿದ್ದರು. ಆದರೆ ಈಗ ವಿಚಾರಣೆಗೆ ಹಾಜರಾಗಲಾಗದಷ್ಟು ಬೆನ್ನು ನೋವಿದೆಯೇ ಎಂಬ ಅಚ್ಚರಿ ಮೂಡಿದೆ. ಸತತ ಶೂಟಿಂಗ್ ಮಾಡಿದ್ದರಿಂದ ಬೆನ್ನು ನೋವು ಉಲ್ಬಣವಾಗಿದೆ ಎಂದು ವಕೀಲರು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಉಳಿದಂತೆ ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಈ ವೇಳೆ ಆರೋಪಿಗಳು ತಮ್ಮ ಮೊಬೈಲ್ ಮರಳಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.