ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮತ್ತು ವಾಹಿನಿಗೆ ಲಾಯರ್ ಸಂಘದಿಂದ ಎಚ್ಚರಿಕೆ

Krishnaveni K

ಭಾನುವಾರ, 6 ಅಕ್ಟೋಬರ್ 2024 (17:41 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ವಿರುದ್ಧ ಈಗ ವಕೀಲರ ಸಂಘ ತಿರುಗಿಬಿದ್ದಿದೆ. ಅವರ ವಿರುದ್ಧ ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದಿದೆ.

ಬಿಗ್ ಬಾಸ್ ಮನೆಯಲ್ಲಿ ನಾನು ಲಾಯರ್. ಮನಸ್ಸು ಮಾಡಿದ್ರೆ ಈ ಕ್ಷಣಕ್ಕೆ ಏನು ಬೇಕಾದರೂ ಮಾಡಬಹುದು ಎಂದು ಸವಾಲು ಹಾಕುತ್ತಿರುವ ನಡುವೆಯೇ ಬಾರ್ ಕೌನ್ಸಿಲ್ ಅವರ ನೋಂದಣಿ ರದ್ದುಗೊಳಿಸಿತ್ತು. ಅವರ ಪ್ರಮಾಣ ಪತ್ರಗಳನ್ನು ಹಿಂದೆ ಪಡೆಯಲು ಸೂಚಿಸಿತ್ತು.

ಇದರ ಬೆನ್ನಲ್ಲೇ ಈಗ ಅವರನ್ನು ಕಿಚ್ಚ ಸುದೀಪ್ ಹಾಗೂ ಕಲರ್ಸ್ ವಾಹಿನಿ ತನ್ನ ಪ್ರೋಮೋಗಳಲ್ಲಿ ವಕೀಲ್ ಸಾಹಬ್, ಲಾಯರ್ ಎಂದು ಸಂಬೋಧಿಸುತ್ತಿರುವುದಕ್ಕೆ ವಕೀಲರ ಸಂಘವು ವಿರೋಧ ವ್ಯಕ್ತಪಡಿಸಿದೆ. ವಕೀಲಿ ವೃತ್ತಿಗೆ ಅದರದ್ದೇ ಆದ ಗೌರವವಿದೆ. ಇಂಥ ಸಂದರ್ಭದಲ್ಲಿ ಅವರ ಹಿನ್ನಲೆಯನ್ನು ಗಮನಿಸದೇ ತಮ್ಮ ವಾಹಿನಿಯಲ್ಲಿ ಅವರನ್ನು ವಕೀಲರು ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ನೋವುಂಟು ಮಾಡಿದೆ ಎಂದು ಪತ್ರ ಬರೆದಿದೆ.

ಹೀಗಾಗಿ ನಿಮ್ಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಗದೀಶ್ ಅವರನ್ನು ವಕೀಲರು ಎಂದು ಬಿಂಬಿಸಬಾರದು ಎಂದು ವಕೀಲರ ಸಂಘ ಪತ್ರ ಬರೆದು ವಾಹಿನಿಗೆ ಸೂಚನೆ ನೀಡಿದೆ. ಈ ವಿಚಾರವನ್ನು ನೀವು ಮತ್ತು ಬಿಗ್ ಬಾಸ್ ಸ್ಪರ್ಧಿಗಳಿಗೂ ಮನವರಿಕೆ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಕೀಲಿ ಸಂಘ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ