BBK11: ಜಗದೀಶ್, ರಂಜಿತ್ ರನ್ನು ರಾತ್ರೋ ರಾತ್ರಿ ಮನೆಯಿಂದ ಹೊರದಬ್ಬಿದ ಬಿಗ್ ಬಾಸ್: ಕಾರಣವೇನು

Krishnaveni K

ಬುಧವಾರ, 16 ಅಕ್ಟೋಬರ್ 2024 (13:50 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಜಗದೀಶ್ ಮತ್ತು ರಂಜಿತ್ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದ್ದು ಪರಿಸ್ಥಿತಿ ಹದ್ದು ಮೀರಿದ ಹಿನ್ನಲೆಯಲ್ಲಿ ಇಬ್ಬರನ್ನೂ ಮನೆಯಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಜಗದೀಶ್ ಈ ಸೀಸನ್ ಆರಂಭದಿಂದಲೂ ಇತರೆ ಸ್ಪರ್ಧಿಗಳ ಜೊತೆ ಕಿರಿಕ್ ಮಾಡುತ್ತಲೇ ಇದ್ದರು. ಮೊದಲ ವಾರಾಂತ್ಯದಲ್ಲೇ ಬಿಗ್ ಬಾಸ್ ನನ್ನೇ ಬೈದು ಕೊನೆಗೆ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಒಂದು ವಾರ ಕಿತ್ತಾಟಗಳಿದ್ದರೂ ಪ್ರೇಕ್ಷಕರನ್ನು ರಂಜಿಸಿದ್ದರು.

ಆದರೆ ಈ ವಾರ ಮತ್ತೆ ಅವರ ಕಿರಿಕ್ ಶುರುವಾಗಿದೆ. ಬಿಗ್ ಬಾಸ್ ನ್ನೇ ಏಕವಚನದಲ್ಲಿ ನಿಂದಿಸಿದ್ದರು. ಕೊನೆಗೆ ಅವರನ್ನು ಕನ್ ಫೆಷನ್ ರೂಂಗೆ ಕರೆದೊಯ್ದು ಬಿಗ್ ಬಾಸ್ ಮಾತನಾಡಿಸಿದ್ದರು. ಇದರ ನಡುವೆ ರಂಜಿತ್ ಮನೆಯ ಇತರೆ ಸದಸ್ಯರ ಜೊತೆ ಇನ್ನು ಮುಂದೆ ಏನಾದ್ರೂ ಅವರು ಸುಖಾ ಸುಮ್ಮನೇ ಕಿರಿಕ್ ಮಾಡಿಕೊಂಡು ಬಂದರೆ ನನ್ನ ಕೈಯಲ್ಲಿ ತಿಂತಾರೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಇಂದಿನ ಎಪಿಸೋಡ್ ನಲ್ಲಿ ಜಗದೀಶ್ ಮತ್ತು ಮನೆಯ ಸದಸ್ಯರ ಕಿತ್ತಾಟ ನಡೆದಿರುವ ಪ್ರೋಮೋಗಳು ಹರಿಯಬಿಡಲಾಗಿದೆ. ಇದರ ನಡುವೇ ಜಗದೀಶ್ ಮತ್ತು ರಂಜಿತ್ ನಡುವೆ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇಬ್ಬರೂ ಹೊಡೆದಾಡಿಕೊಂಡ ಹಿನ್ನಲೆಯಲ್ಲಿ ಇಬ್ಬರನ್ನೂ ಬಿಗ್ ಬಾಸ್ ಶೋನಿಂದಲೇ ಹೊರಹಾಕಲಾಗಿದೆ ಎಂಬ ಸುದ್ದಿ ಬರುತ್ತಿದೆ.

ಯಾವುದಕ್ಕೂ ಇಂದಿನ ಎಪಿಸೋಡ್ ನಲ್ಲಿ ಉತ್ತರ ಸಿಗಲಿದೆ. ಈ ಹಿಂದೆ ಹುಚ್ಚ ವೆಂಕಟ್ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದ್ದು ಭಾರೀ ವಿವಾದಕ್ಕೊಳಗಾಗಿತ್ತು. ಬಳಿಕ ಹುಚ್ಚ ವೆಂಕಟ್ ನ್ನು ಶೋನಿಂದಲೇ ಹೊರಹಾಕಲಾಗಿತ್ತು. ಈಗ ರಂಜಿತ್ ಮತ್ತು ಜಗದೀಶ್ ರನ್ನೂ ಇದೇ ಕಾರಣಕ್ಕೆ ಹೊರಹಾಕಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ