ಬೆಂಗಳೂರು: ಡಿಬಾಸ್ ಅಭಿಮಾನಿಗಳು ಮತ್ತು ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ್ ಮತ್ತೊಂದು ವಿಡಿಯೋ ಪ್ರಕಟಿಸಿದ್ದು ಡಿ ಕಂಪನಿ ಅಲ್ಲ ಡುಬಾಕ್ ದಾವೂದ್ ಕಂಪನಿ ಅದು ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಫೇಸ್ ಬುಕ್ ನಲ್ಲಿ ವಿಡಿಯೋ ಪ್ರಕಟಿಸಿರುವ ಪ್ರಥಮ್, ಡಿಬಾಸ್ ಅಭಿಮಾನಿಗಳಿಗೆ ಇನ್ನಿಲ್ಲದಂತೆ ಉಗಿದಿದ್ದಾರೆ. ಪ್ರಥಮ್ ದೇವಾಲಯವೊಂದಕ್ಕೆ ಹೋಗಿದ್ದಾಗ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿದ್ದರು ಎಂದು ವರದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳ ಅಧಿಕೃತ ಸಂಘ ಡಿ ಕಂಪನಿ ಎಂಬ ಸೋಷಿಯಲ್ ಮೀಡಿಯಾ ಪುಟದಲ್ಲಿ ಘಟನೆ ಬಗ್ಗೆ ವಿವರಣೆ ನೀಡಲಾಗಿತ್ತು. ಇದು ಯಾವುದೋ ಚಿಪ್ಸು, ಪಪ್ಸು ಮ್ಯಾಟರ್. ಪ್ರಥಮ್ ಎಲ್ಲೋ ಪಾರ್ಟಿ ಮಾಡಕ್ಕೆ ಹೋಗಿದ್ದಾಗ ಅಲ್ಲಿ ಏನೋ ಗಲಾಟೆಯಾಗಿದ್ದಕ್ಕೆ ಡಿಬಾಸ್ ಅಭಿಮಾನಿಗಳು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.
ಇದಕ್ಕೀಗ ಪ್ರಥಮ್ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನೆಲ್ಲಾ ಮುಚ್ಚಿ ಹಾಕಲು ಹೇಳಿ. ಇದನ್ನು ಬಿಟ್ಟು ಯಾವುದೋ ಡಿ ಕಂಪನಿನೋ ದರ್ಬೇಸಿಗಳ ಕಂಪನಿನೋ ಅಂತೇನೋ ಇದೆ ಅದಕ್ಕೆ ಕೊಟ್ಟು ಬಿಡಿ. ಎಲ್ಲಾ ಕೇಸ್ ಸಾಲ್ವ್ ಮಾಡುತ್ತಾರೆ. ಏನೋ ಚಿಪ್ಸು ಪಪ್ಸು ಮ್ಯಾಟರ್ ಅಂತೆ. ನಿಮಗೆ ಸ್ವಲ್ಪವಾದರೂ ಕಾಮನ್ ಸೆನ್ಸ್ ಬೇಡ್ವಾ? ನನ್ನ ಲೈಫ್ ನಲ್ಲೇ ನಾನು ಸಂಸ್ಕರಿಸಿದ ಆಹಾರ ತಿನ್ನಲ್ಲ. ಅಂದರೆ ಈ ಚಿಪ್ಸು, ಪೆಪ್ಸಿ ಅಂತಹದ್ದೆಲ್ಲಾ ನಾನು ಮುಟ್ಟಲ್ಲ. ಅದಕ್ಕೇ ನಾನು ಇಷ್ಟು ಸುಂದರವಾಗಿರೋದು. ಕರ್ನಾಟಕದಲ್ಲಿ ನನ್ನಷ್ಟು ಸುಂದರವಾಗಿರೋರು ಯಾರಾದರೂ ಇದ್ದಾರಾ ಹೇಳಿ ನೋಡೋಣ. ಅದನ್ನು ತಿನ್ನಕ್ಕೆ ರೌಡಿಗಳತ್ರೆ ಹೋಗಿದ್ನಂತೆ. ಅವರು ಬಂದಿದ್ದು ದರ್ಶನ್ ಸರ್ ಫ್ಯಾನ್ಸ್ ಅಲ್ವಂತೆ. ಫ್ಯಾನ್ಸ್ ಅಲ್ಲಾಂದ್ರೆ ನೀವು ಹೇಗ್ರೋ ಎನ್ ಕ್ವಯರಿ ಮಾಡಕ್ಕಾಗುತ್ತೆ? ನಾನು ಕಂಪ್ಲೇಂಟ್ ಬೇಕೆಂದೇ ಆಗಲೇ ಕೊಡಲಿಲ್ಲ. ಅದಕ್ಕೆ ಕಾರಣವೂ ಇದೆ. ನನಗೂ ಅವರಿಗೂ ಆಪ್ತರಾದವರು ದೊಡ್ಡವರೊಬ್ಬರು ನಾನು ಎಲ್ಲಾ ಸಾಲ್ವ್ ಮಾಡ್ತೀನಿ ಎಂದ್ರು. ಅದಕ್ಕೇ ಕಂಪ್ಲೇಂಟ್ ಕೊಡಕ್ಕೆ ಹೋಗಿರಲಿಲ್ಲ ಅಷ್ಟೆ. ಥೂ ನಿಮ್ಮ ಯೋಗ್ಯತೆಗೆ. ಇವರಿಗೆಲ್ಲಾ ಸ್ವಲ್ಪ ಶಿಕ್ಷಣ ಕೊಡಿ ಎಂದು ಡಿಕೆ ಶಿವಕುಮಾರ್ ಅವರಿಗೆ ಹೇಳ್ತೀನಿ. ಅದ್ಯಾವುದೋ ಡಿ ಕಂಪನಿ ಅಂತೆ. ಡಿ ಅಂದರೆ ಅದ್ಯಾವುದೋ ಡಾನ್ ಇದ್ದಾನಲ್ಲಾ ದಾವೂದ್ ಇಬ್ರಾಹಿಂ. ನಾನು ದೇವರ ಪೂಜೆಗೆ ಹೋಗಿದ್ದು ಅದು ಬಿಟ್ಟು ಪಪ್ಸು, ಚಿಪ್ಸು ಮ್ಯಾಟರ್ ಅಂತೆ. ರೌಡಿ ಹತ್ರೆ ಹೋಗಿ ಚಿಪ್ಸು, ಪಪ್ಸು ಅಂತ ಕೇಳಕ್ಕೆ ಆಗುತ್ತಾ? ಮೊದಲು ಚೆನ್ನಾಗಿ ದುಡಿದು ನಿಮ್ಮ ಅಪ್ಪ ಅಮ್ಮನ ಸಾಕಿ ಎಂದು ಪ್ರಥಮ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.