ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾದ ಬಳಿಕ ನಟ ದರ್ಶನ್ ಮದರ್ ಇಂಡಿಯಾ ಎಂದು ಕರೆಯುತ್ತಿದ್ದ ಸುಮಲತಾ ಅಂಬರೀಶ್ ಜೊತೆಗೆ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ಸುಮ ಅಮ್ಮನಿಂದ ದೂರವಿದ್ದರೂ ಅಂಬಿ ಅಪ್ಪಾಜಿಯನ್ನು ಮಾತ್ರ ದರ್ಶನ್ ಮರೆತಿಲ್ಲ.
ಇಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವಾಗಿದ್ದು, ಅಂಬಿ ಅಪ್ಪಾಜಿ ಹುಟ್ಟುಹಬ್ಬಕ್ಕೆ ದರ್ಶನ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಸಂದೇಶ ಬರೆದು ಅಂಬರೀಶ್ ಅವರ ಹುಟ್ಟುಹಬ್ಬದಂದು ಸ್ಮರಿಸಿದ್ದಾರೆ.
ತಂದೆ ಸಮಾನರಾದ ಅಂಬಿ ಅಪ್ಪಾಜಿರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ.
ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ ನಿಮ್ಮ ಕಲಾಸೇವೆ ಹಾಗೂ ಜನ ಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವಿ ಲವ್ ಯು ರೆಬಲ್ ಸ್ಟಾರ್ ಎಂದು ದರ್ಶನ್ ಸಂದೇಶ ಬರೆದುಕೊಂಡಿದ್ದಾರೆ.
ಅಂಬರೀಶ್ ತೀರಿಕೊಂಡ ಬಳಿಕವೂ ಸುಮಲತಾ ಅವರಿಗೆ ಬೆನ್ನೆಲುಬಾಗಿ ನಿಂತವರು ದರ್ಶನ್. ಅವರ ಮನೆ ಮಗನಾಗಿಯೇ ಇದ್ದ ದರ್ಶನ್ ರೇಣುಕಾಸ್ವಾಮಿ ಪ್ರಕರಣದ ಬಳಿಕ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಿದ್ದರೂ ಸುಮಲತಾ ಈಗಲೂ ದರ್ಶನ್ ನನ್ನ ಮಗನೇ ಎಂದು ಸ್ಪಷ್ಟನೆ ಕೊಟ್ಟಿದ್ದು ಇದೆ. ಅದೇನೇ ಇದ್ದರೂ ದರ್ಶನ್ ಮಾತ್ರ ಸುಮಲತಾರಿಂದ ದೂರವೇ ಉಳಿದಿದ್ದರು.