ವಿಮಾನ ಅಪಘಾತದಿಂದ ಪಾರಾದ ಧ್ರುವ ಸರ್ಜಾ, ಮಾರ್ಟಿನ್ ತಂಡ

Krishnaveni K

ಮಂಗಳವಾರ, 20 ಫೆಬ್ರವರಿ 2024 (08:50 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ ಕೂದಲೆಳೆಯಲ್ಲಿ ವಿಮಾನ ದುರಂತದಿಂದ ಪಾರಾಗಿದೆ. ಈ ವಿಚಾರವನ್ನು ಸ್ವತಃ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಮಾರ್ಟಿನ್ ಸಿನಿಮಾ ಚಿತ್ರೀಕರಣಕ್ಕಾಗಿ ಧ್ರುವ ಮತ್ತು ಚಿತ್ರತಂಡ ಶ್ರೀನಗರಕ್ಕೆ ತೆರಳಿತ್ತು. ಅಲ್ಲಿಂದ ವಾಪಸ್ ದೆಹಲಿಗೆ ಬರುವಾಗ ದುರಂತ ಸಂಭವಿಸುವುದರಲ್ಲಿತ್ತು. ವಿಮಾನ ಕ್ರ್ಯಾಶ್ ಆಗುವ ಅಪಾಯದಲ್ಲಿತ್ತು. ಆದರೆ ಪೈಲಟ್ ನ ಚಾಕಚಕ್ಯತೆಯಿಂದ ವಿಮಾನ ಸೇಫ್ ಆಗಿ ಲ್ಯಾಂಡ್ ಮಾಡಲಾಗಿದೆ. ಹೀಗಾಗಿ ಪ್ರಾಣ ಉಳಿಸಿಕೊಂಡು ನಿಟ್ಟುಸಿರು  ಬಿಟ್ಟಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಮಾನದ ವಿಡಿಯೋ ಪ್ರಕಟಿಸಿದ್ದ ಧ್ರುವ ‘ಇಷ್ಟು ಕೆಟ್ಟ ಅನುಭವ ಜೀವನದಲ್ಲೇ ಆಗಿರಲಿಲ್ಲ.  ನಾವು ಈಗ ಸೇಫ್ ಆಗಿದ್ದೇವೆ. ಜೈ ಆಂಜನೇಯ. ಪೈಲಟ್ ಗೆ ಧನ್ಯವಾದ’ ಎಂದಿದ್ದಾರೆ. ಈ  ವೇಳೆ ಇಡೀ ಮಾರ್ಟಿನ್ ಚಿತ್ರತಂಡ ಅವರ ಜೊತೆಗೆ ವಿಮಾನದಲ್ಲಿತ್ತು.

ಮೊದಲ ಬಾರಿಗೆ ಸಾವನ್ನು ಹತ್ತಿರದಿಂದ ನೋಡಿ ಬಂದಿದ್ದೇವೆ. ಚಿರು, ತಂದೆ-ತಾಯಿ, ಅಭಿಮಾನಿಗಳ ಹಾರೈಕೆಯಿಂದ ಪಾರಾಗಿದ್ದೇವೆ. ಇದು ನಮಗೆಲ್ಲಾ ಜೀವನವನ್ನು ಇನ್ನಷ್ಟು ಚೆನ್ನಾಗಿ ಬದುಕಲು ದೇವರು ಕೊಟ್ಟ ಅವಕಾಶ. ವಿಮಾನದಲ್ಲಿದ್ದಾಗ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದೆವು. ಸೇಫ್ ಆಗಿ ಲ್ಯಾಂಡ್ ಆದಾಗ ಖುಷಿಗೆ ಪಾರವೇ ಇರಲಿಲ್ಲ. ನಮ್ಮ ಕುಟುಂಬದವರಿಗೆ ಫೋನ್ ಮಾಡಿ ಖುಷಿ ಹಂಚಿಕೊಂಡೆವು’ ಎಂದಿದ್ದಾರೆ ಧ್ರುವ ಸರ್ಜಾ.

ಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ಕೂಡಾ ಕ್ರ್ಯಾಶ್ ಆಗುವ ಅಪಾಯಕ್ಕೀಡಾಗಿತ್ತು. ಆದರೆ ತುರ್ತು ಲ್ಯಾಂಡಿಂಗ್ ಮಾಡಿದ್ದರಿಂದ ಅದೃಷ್ಟವಶಾತ್ ಅವರು ಪಾರಾಗಿದ್ದರು. ಇದೀಗ ಧ್ರುವ ಮತ್ತು ತಂಡದ ಕಡೆಯಿಂದ ಅಂತಹದ್ದೇ ಆತಂಕಕಾರೀ ಸುದ್ದಿ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ