ದೂರವಾಗಿದ್ದ ಜಗ್ಗೇಶ್-ಮಠ ಗುರುಪ್ರಸಾದ್ ಮತ್ತೆ ಜತೆಯಾದ್ರು

ಗುರುವಾರ, 19 ಸೆಪ್ಟಂಬರ್ 2019 (09:18 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಮಠ. ಈ ಸಿನಿಮಾ ನಂತರ ನಿರ್ದೇಶಕ ಗುರುಪ್ರಸಾದ್ ಜತೆಗೆ ಜಗ್ಗೇಶ್ ಎದ್ದೇಳು ಮಂಜುನಾಥ ಸಿನಿಮಾ ಮಾಡಿಯೂ ಹಿಟ್ ಆದರು.


ಆದರೆ ಆ ಎರಡು ಹಿಟ್ ಸಿನಿಮಾಗಳ ಬಳಿಕ ಈ ಜೋಡಿ ಯಾಕೋ ಮನಸ್ತಾಪ ಮಾಡಿಕೊಂಡು ದೂರ ದೂರವಾಯಿತು. ಇದೀಗ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ.

ಜಗ್ಗೇಶ್ ಮತ್ತೆ ಮಠ ನಿರ್ದೇಶಕ ಗುರುಪ್ರಸಾದ್ ಜತೆಗಿನ ವೈಮನಸ್ಯ ಮರೆತು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ಪ್ರಕಟಿಸಿದ್ದಾರೆ. 10 ವರ್ಷವಾಯಿತು ನಮ್ಮಿಬ್ಬರ ಜತೆಯಾಟವಾಗಿ. ನಾನಾ ಕಾರಣಕ್ಕೆ ನಾವಿಬ್ಬರೂ ಇಷ್ಟು ವರ್ಷ ಸೇರಲಾಗಲಿಲ್ಲ. ಗುರುಪ್ರಸಾದ್ ನೀವು ಹುಂ ಅಂದರೆ ಮತ್ತೊಮ್ಮೆ ನಮ್ಮಿಬ್ಬರ ಜೋಡಿ ಕರ್ನಾಟಕ ನಗಿಸುವ ಎಂದ. ನಾನು ಹುಂ  ಅಂದೆ. ಮಜ್ಜಿಗೆಯಲ್ಲಿನ ಬೆಣ್ಣೆಯಂತೆ ಕಡೆಯಲು ಹೋಗಿದ್ದಾನೆ ಕತೆ. ನಮ್ಮಿಬ್ಬರ ಜೋಡಿಗೆ ನಿಮ್ಮ ಲೈಕ್ಸ್ ಎಷ್ಟಿದೆ ನೋಡೋಣ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಈ ಮೂಲಕ ಈ ಹಿಟ್ ಜೋಡಿ ಮತ್ತೊಂದು ರಸವತ್ತಾದ ಸಿನಿಮಾ ಮಾಡಲು ಹೊರಟಿದೆ. ಮೂಲಗಳ ಪ್ರಕಾರ ನವಂಬರ್ ನಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ