ದರ್ಶನ್ ಜೊತೆಗಿನ ಸಮಸ್ಯೆ ಬಗ್ಗೆ ಕಿಚ್ಚ ಸುದೀಪ್ ನೇರ ಮಾತು

Krishnaveni K

ಸೋಮವಾರ, 29 ಜನವರಿ 2024 (09:37 IST)
ಬೆಂಗಳೂರು: ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ಆದರೆ ಕೆಲವು ವರ್ಷಗಳಿಂದ ಇಬ್ಬರೂ ದೂರವಾಗಿದ್ದಾರೆ.

ದರ್ಶನ್ ನೇರವಾಗಿಯೇ ತಾನು ಸುದೀಪ್ ಸ್ನೇಹಿತನಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಹೊಸದೇನಲ್ಲ. ಹಾಗಿದ್ದರೂ ಸುದೀಪ್ ಹಲವು ಬಾರಿ ದರ್ಶನ್ ಬಗ್ಗೆ ಮಾತನಾಡಿದ್ದು, ನನಗೆ ದರ್ಶನ್ ಯಾವತ್ತಿಗೂ ಸ್ನೇಹಿತ ಎಂದಿದ್ದರು. ಆದರೆ ಇಬ್ಬರೂ ಒಬ್ಬರಿಗೊಬ್ಬರು ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ.

ಹಾಗಿದ್ದರೂ ಈ ಬಾರಿ ಸುಮಲತಾ ಅಂಬರೀಶ್ ಬರ್ತ್ ಡೇ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರು. ಹಾಗಿದ್ದರೂ ಒಬ್ಬರ ಮುಖ ಒಬ್ಬರು ನೋಡಲಿಲ್ಲ. ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದ ಇಬ್ಬರೂ ಒಂದಾಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ.

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ರ ಫೈನಲ್ ಬಳಿಕ ಸುದೀಪ್ ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಸಣ್ಣದೊಂದು ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ‘ಸರ್, ನಿಮ್ದು ಮತ್ತೆ ದರ್ಶನ್ ಅವರ್ದು ಸಮಸ್ಯೆನ ಯಾವಾಗ ಸೋಲ್ವ್ ಮಾಡ್ಕೋತೀರಾ, ಇನ್ನು ಎಷ್ಟು ಟೈಮ್ ತಗೊಳ್ತೀರಿ’ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಸುದೀಪ್, ‘ಸಮಸ್ಯೆ ಏನು ಅಂತ ಇಬ್ರು ಹುಡುಕ್ತಾ ಇದ್ದೀವಿ’ ಎಂದಿದ್ದಾರೆ. ಕೆಲವು ದಿನಗಳ ಮೊದಲು ಇದೇ ರೀತಿ ಪ್ರಶ್ನೋತ್ತರಾವಳಿಯಲ್ಲಿ ಅಭಿಮಾನಿಯೊಬ್ಬರು ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಆಗ ಸುದೀಪ್ ನಾನು ನೋಡಿಲ್ಲ ಎಂದು ನಿಮಗೆ ಯಾರು ಹೇಳಿದರು ಎಂದು ಹೇಳಿದ್ದರು. ಇದೀಗ ಮತ್ತೆ ದರ್ಶನ್‍ ಬಗ್ಗೆ ಮಾತನಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ