ನಾನು ಕೈಗೆ ತೊಟ್ಟಿರುವುದು ಕಡಗ, ಬಳೆ ಅಲ್ಲ! ಮುಂದುವರಿದ ಕಿಚ್ಚ ಸುದೀಪ್ ಟ್ವೀಟ್ ವಾರ್

ಶನಿವಾರ, 21 ಸೆಪ್ಟಂಬರ್ 2019 (08:59 IST)
ಬೆಂಗಳೂರು: ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ ಆರೋಪದಲ್ಲಿ ರಾಕೇಶ್ ಎಂಬಾತನನ್ನು ಬಂಧಿಸಿದ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಪೈರಸಿ ಮಾಡುವವರ ವಿರುದ್ಧ ಗುಡುಗಿದ್ದಾರೆ.


ಪೈರಸಿಯಾಗುತ್ತಿದ್ದಂತೇ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಕೆಲಸ ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಕೆಲವರು ಆರೋಪಿಸಿದ್ದರು. ಇದಕ್ಕೆ ಸಿಟ್ಟಿಗೆದ್ದಿದ್ದ ನಟ ದರ್ಶನ್ ನನ್ನ ಅನ್ನದಾತರನ್ನು ಕೆಣಕಲು ಬಂದರೆ ಸುಮ್ಮನಿರೋಲ್ಲ ಎಂದು ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಕಿಚ್ಚ ಸುದೀರ್ಘ ಟ್ವಿಟರ್ ನಲ್ಲಿ ಸುದೀರ್ಘ ಪತ್ರ ಬರೆದು ನಾನು ಅಥವಾ ನನ್ನ ಚಿತ್ರತಂಡ ಯಾವುದೇ ವ್ಯಕ್ತಿಯ ಬಗ್ಗೆ ಬೆರಳು ಮಾಡಿಲ್ಲ ಎಂದಿದ್ದರು.

ಇದೀಗ ಬಂಧಿತ ರಾಕೇಶ್ ನಾನು ಡಿ ಬಾಸ್ ಅಭಿಮಾನಿ. ಅವರ ಮೇಲಿನ ಅಭಿಮಾನದಿಂದ ಪೈರಸಿ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೇ ಮತ್ತೆ ಈ ಇಬ್ಬರು ಸ್ಟಾರ್ ಗಳ ನಡುವಿನ ಟ್ವಿಟರ್ ಸಮರ ತಾರಕಕ್ಕೇರಿದೆ. ಪೈರಸಿ ಮಾಡಿದ ಆರೋಪಿ ತಪ್ಪೊಪ್ಪಿಗೆ ನೀಡುತ್ತಿದ್ದಂತೇ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ‘ನಾನು ಮತ್ತು ನನ್ನ ಸ್ನೇಹಿತರು ಕೈಗೆ ತೊಟ್ಟಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ತಾಳ್ಮೆ ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ’ ಎಂದು ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲ ಇನ್ನೊಂದು ಟ್ವೀಟ್ ಮಾಡಿರುವ ಕಿಚ್ಚ ನನಗೆ ಪೈರಸಿಗಿಂತ ಪೈರಸಿ ಮಾಡಿದವರ ಬಗ್ಗೆ ಹೆಚ್ಚು ಕುತೂಹಲವಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಇದರ ಬೇರಿನವರೆಗೂ ಇಳಿಯದೇ ಸುಮ್ಮನಿರಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ