ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದ ಬಹುಭಾಷಾ ನಟಿ ಶ್ವೇತಾ ಹೊರನಡೆದಿದ್ದಾರೆ. ಅವರ ಸ್ಥಾನಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ.
ಲಕ್ಷ್ಮೀ ನಿವಾಸ ಧಾರವಾಹಿ ಕೂಡುಕುಟುಂಬವೊಂದರ ಕತೆ. ಮನೆ ಕಟ್ಟಬೇಕು ಎನ್ನುವುದು ಲಕ್ಷ್ಮಿಯ ಕನಸಾದರೆ ಗಂಡ ಶ್ರೀನಿವಾಸ್ ಗೆ ಮಕ್ಕಳನ್ನು ಉತ್ತಮ ಸ್ಥಿತಿಗೆ ತಲುಪಿಸುವ ಕನಸು. ಪ್ರತಿನಿತ್ಯ ಒಂದು ಗಂಟೆ ಪ್ರಸಾರವಾಗುವ ಧಾರವಾಹಿ ಈಗಾಗಲೇ ಟಿಆರ್ ಪಿಯಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ.
ಆದರೆ ಈಗ ಲಕ್ಷ್ಮೀ ಪಾತ್ರ ಮಾಡುತ್ತಿದ್ದ ಶ್ವೇತಾ ಹೊರಬಂದಿದ್ದಾರೆ. ಶ್ವೇತಾ ಮೂಲತಃ ಚೆನ್ನೈಯವರು. ಹೀಗಾಗಿ ಅವರು ಶೂಟಿಂಗ್ ಗಾಗಿ ಇಲ್ಲಿಗೆ ಬರಬೇಕಿತ್ತು. ಆದರೆ ಇತ್ತೀಚೆಗೆ ತಮ್ಮ ತಾಯಿಯ ಅನಾರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಧಾರವಾಹಿಯಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಕ್ಷ್ಮೀ ಪಾತ್ರದಿಂದ ಹೊರಬರುತ್ತಿದ್ದೇನೆ. ನನ್ನ ಮೇಲಿಟ್ಟಿರುವ ನಿಮ್ಮ ಪ್ರೀತಿಗೆ ಮತ್ತು ನನ್ನನ್ನು ಮತ್ತೆ ಕನ್ನಡಕ್ಕೆ ಪರಿಚಯಿಸಿದ ಜೀ ಕನ್ನಡಕ್ಕೆ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದುಕೊಂಡಿದ್ದಾರೆ.
ಹೊಸ ಲಕ್ಷ್ಮೀ ಯಾರು?
ಇಬ್ಬರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಅಮ್ಮನಾಗಿ ಪ್ರಬುದ್ಧ ಅಭಿನಯ ತೋರುತ್ತಿದ್ದ ಶ್ವೇತಾ ಜಾಗಕ್ಕೆ ಈಗ ಹೊಸ ಲಕ್ಷ್ಮಿಯಾಗಿ ಅಮೃತವರ್ಷಣಿ, ಕನ್ಯಾದಾನ ಖ್ಯಾತಿಯ ಮಾಧುರಿ ಬಂದಿದ್ದಾರೆ. ಮುಂದಿನ ಸಂಚಿಕೆಯಿಂದ ಮಾಧುರಿ ಲಕ್ಷ್ಮೀಯಾಗಿ ನಿಮ್ಮ ಮುಂದೆ ಬರಲಿದ್ದಾರೆ.